ADVERTISEMENT

ಶಾಮನೂರು–ಹರಿಹರ ಬೈಪಾಸ್‌ ಬಳಿ ತಡೆಗೋಡೆಗೆ ಕಾರು ಡಿಕ್ಕಿ: ಬೆಂಗಳೂರಿನ ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2019, 9:21 IST
Last Updated 4 ಮೇ 2019, 9:21 IST
ದಾವಣೆಗೆರೆ ಸಮೀಪ‍ದ ಹೊಸ ಕುಂದವಾಡದಲ್ಲಿ ಶಾಮನೂರು–ಹರಿಹರ ಬೈಪಾಸ್‌ ರಸ್ತೆಯಲ್ಲಿ ಅಪಘಾತವಾದ ಕಾರಿನ ಒಳಗೆ ನುಗ್ಗಿ ಬಂದಿರುವ ತಡೆಗೋಡೆಯ ಕಂಬಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕತ್ತರಿಸುತ್ತಿರುವುದು.
ದಾವಣೆಗೆರೆ ಸಮೀಪ‍ದ ಹೊಸ ಕುಂದವಾಡದಲ್ಲಿ ಶಾಮನೂರು–ಹರಿಹರ ಬೈಪಾಸ್‌ ರಸ್ತೆಯಲ್ಲಿ ಅಪಘಾತವಾದ ಕಾರಿನ ಒಳಗೆ ನುಗ್ಗಿ ಬಂದಿರುವ ತಡೆಗೋಡೆಯ ಕಂಬಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕತ್ತರಿಸುತ್ತಿರುವುದು.   

ದಾವಣೆಗೆರೆ: ಸಮೀಪ‍ದ ಹೊಸ ಕುಂದವಾಡ ಗ್ರಾಮದ ಶಾಮನೂರು–ಹರಿಹರ ಬೈಪಾಸ್‌ ರಸ್ತೆಯಲ್ಲಿ ಶನಿವಾರ ಬೆಳಗಿನಜಾವ ಕಬ್ಬಿಣದ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ಲೆಕ್ಕಪರಿಶೋಧಕ ಕೆ. ಶಿವಪ್ರಕಾಶ್‌ (42) ಹಾಗೂ ಪತ್ನಿ ಉಮಾ (36) ಮೃತರು. ಚಾಲಕ ನಂದೀಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶಿವಪ್ರಕಾಶ್‌ ಅವರು ಬೆಂಗಳೂರಿನಿಂದ ಉಕ್ಕಡಗಾತ್ರಿಗೆ ತೆರಳುತ್ತಿದ್ದರು. ಬೆಳಗಿನಜಾವ 4 ಗಂಟೆ ಸುಮಾರಿಗೆ ಚಾಲಕ ನಿದ್ದೆಯ ಮಂಪರಿನಲ್ಲಿ ರಸ್ತೆ ಪಕ್ಕದ ಕಬ್ಬಿಣದ ಕಂಬಿಗಳ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ADVERTISEMENT

ಅತಿ ವೇಗದಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಬ್ಬಿಣದ ಕಂಬಿಯು ಮುಂಭಾಗದಲ್ಲಿ ಕುಳಿತಿದ್ದ ಶಿವಪ್ರಕಾಶ್‌ ಅವರನ್ನು ಸೀಳಿಕೊಂಡು ಹಿಂಬಂದಿಯಲ್ಲಿ ಕುಳಿತಿದ್ದ ಉಮಾ ಅವರ ಹೊಟ್ಟೆಯನ್ನು ಹೊಕ್ಕಿ ಕಾರಿನ ಹಿಂಭಾಗದಲ್ಲಿ ಹೊರಗೆ ಬಿದ್ದಿತ್ತು. ಅಪಘಾತದ ತೀವ್ರತೆಯ ಪರಿಣಾಮ ನಿದ್ರೆಯಲ್ಲೇ ಇಬ್ಬರೂ ಅಸುನೀಗಿದ್ದರು. ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಕಂಬಿಯನ್ನು ಕತ್ತರಿಸಿ ಶವವನ್ನು ಹೊರಗೆ ತೆಗೆದರು. ಕಂಬಿಗೆ ಸಿಲುಕಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕರುಳಿನ ಭಾಗದ ದೃಶ್ಯ ಭೀಕರವಾಗಿತ್ತು.

ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.