ದಾವಣಗೆರೆ: ಮುಂಚೂಣಿ ಕೊರೊನಾ ಕಾರ್ಯಕರ್ತರುಹಾಗೂ 45 ವರ್ಷ ಮೇಲ್ಪಟ್ಟವರಿಗೆ ಜೂನ್ 21ರಿಂದ ಕೋವಿಡ್ ಲಸಿಕೆ ನೀಡುವ ಮೂಲಕ ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಲಸಿಕಾ ಮೇಳದ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
45 ವರ್ಷ ಮೇಲ್ಪಟ್ಟ 2ನೇ ಡೋಸ್ ಪಡೆಯಲು ಅರ್ಹರಿರುವ ಎಲ್ಲರಿಗೂ ಲಸಿಕೆ ನೀಡಬೇಕು. 45 ವರ್ಷ ಮೇಲ್ಪಟ್ಟ ಮೊದಲ ಡೋಸ್ ಪಡೆಯದವರಿಗೂ ಲಸಿಕೆ ನೀಡುವುದು ಹಾಗೂ ಮುಂಚೂಣಿ ಕೊರೊನಾ ಕಾರ್ಯಕರ್ತರು ಲಸಿಕೆ ನೀಡಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮೊದಲ ಡೋಸ್ ಪಡೆದಿರುವವರಿಗೆ ಕರೆ ಮಾಡಿ, ಇಲ್ಲವೇ ಎಸ್.ಎಂ.ಎಸ್ ಕಳುಹಿಸುವ ಮೂಲಕ ಲಸಿಕೆ ಪಡೆಯಲು ಪ್ರೇರೇಪಿಸಬೇಕು. ಪಂಚಾಯಿತಿ, ಕಂದಾಯ ಅಧಿಕಾರಿಗಳು ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಲಸಿಕಾ ಮೇಳದಲ್ಲಿ ಆದ್ಯತಾ ವಲಯದ ಎಲ್ಲರಿಗೂ ಲಸಿಕೆ ನೀಡಬೇಕು. ಹೆಚ್ಚು ಹೆಚ್ಚು ಪರೀಕ್ಷೆ ಮಾಡುವ ಮೂಲಕ ಸೋಂಕಿತರನ್ನು ಬೇಗ ಪತ್ತೆ ಹಚ್ಚುವ ಕೆಲಸ ಆಗಬೇಕು.3 ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸೋಂಕು ತಗಲುವ ಸಂಭವವಿದ್ದು, ದುರ್ಬಲ ವರ್ಗದ ಮಕ್ಕಳ ಪೋಷಕರಿಗೂ ಆದ್ಯತೆಯ ಮೇಲೆ ಲಸಿಕೆ ನೀಡಬೇಕು. ಡೆತ್ ಪಾಕೆಟ್ ಹೆಚ್ಚು ಕಂಡು ಬರುತ್ತಿರುವ ಕಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಎಚ್ಒ ನಾಗರಾಜ್, ಆರ್ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ಡಾ. ನಟರಾಜ್, ಡಾ. ರೇಣುಕಾರಾಧ್ಯ, ತಾಲ್ಲೂಕು ಟಿಎಚ್ಒಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.