ದಾವಣಗೆರೆ: ಪ್ರತಿಯೊಂದು ಕಲೆಗೂ ಮಹತ್ವ ಇದೆ. ಪ್ರತಿ ಕಲಾವಿದನಲ್ಲಿ ಪ್ರತಿಭೆ ಸುಪ್ತವಾಗಿದೆ. ಅವುಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹ ನೀಡಬೇಕು. ಆಗ ಕಲೆಗೂ, ಕಲಾವಿದನಿಗೂ ಮಹತ್ವ ಬರುತ್ತದೆ ಎಂದು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ. ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಕಲಬುರಗಿಯ ಕಲಾವಿದೆ ಜಲಜಾಕ್ಷಿ ಪಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಕಲೆಗಳನ್ನು ಬೆಂಬಲಿಸಬೇಕು ಎಂಬ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ನಿರಂತರ ಪ್ರೋತ್ಸಾಹ ಕೊಡುತ್ತಾ ಬರಲಾಗಿದೆ ಎಂದು ತಿಳಿಸಿದರು.
ಕಲಾವಿದರಿಗೆ ಪ್ರೋತ್ಸಾಹಿಸಿ ಅವರ ಕಲೆಗೆ ವೇದಿಕೆ ಕೊಡುವ ಜೊತೆಗೆ, ಕಲೆಯನ್ನು ಆಸ್ವದಿಸುವುದು ಹಾಗೂ ಗ್ರಹಿಸುವುದನ್ನು ಕಲಿಯಬೇಕು ಎಂದರು.
ಕಲಾವಿದೆ ಜಲಜಾಕ್ಷಿ, ‘ಕಲೆಗೆ ವೇದಿಕೆ ಬೇಕೆಂದು ಕಾಯುತ್ತಾ ಕೂರದೇ ನಮ್ಮ ಪ್ರತಿಭೆಯನ್ನೇ ವೇದಿಕೆ ಮಾಡಿಕೊಳ್ಳಬೇಕು. ಕಲಾಸಕ್ತರು ಯಾವ ರೀತಿ ಕಲೆಯನ್ನು ಆಸ್ವಾದಿಸುತ್ತಾರೆ ಹಾಗೂ ವಿಮರ್ಶೆ ಮಾಡುತ್ತಾರೆ ಎಂಬುದನ್ನು ಕಲಾವಿದರು ಮುಖ್ಯವಾಗಿ ಪರಿಗಣಿಸಬೇಕು’ ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶಕುಮಾರ್ ಪಿ. ವಲ್ಲೇಪುರೆ ಅವರು ಸ್ವಾಗತಿಸಿದರು. ಮಧು ಮತ್ತು ಹೇಮಲತ ಪ್ರಾರ್ಥಿಸಿದರು. ಉಪನ್ಯಾಸಕ ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.