ಶಿವಮೊಗ್ಗ: ಎಲ್ಲರೂ ಸಹೋದರರಂತೆ ಬದುಕಿದರೆ, ಹೊಂದಿಕೊಂಡು ನಡೆದರೆ ಸಮಾಜದಲ್ಲಿ ಸೌಹಾರ್ದ ನೆಲೆಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಸೌರ್ಹಾದ ಗೆಳೆಯರ ಬಳಗ ಶುಕ್ರವಾರ ಹಮ್ಮಿಕೊಂಡಿದ್ದ ಸೌಹಾರ್ದ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿದೆ. ಹಲವು ಉದ್ಯಮಿಗಳು ಜಿಲ್ಲೆಯತ್ತ ಚಿತ್ತ ಹರಿಸಿದ್ದಾರೆ. ಇಂತಹ ಸಮಯದಲ್ಲಿ ಸೌಹಾರ್ದ ವಾತಾವರಣ ಮುಖ್ಯ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ‘ಯಾವ ಧರ್ಮವೂ ಇತರೆ ಧರ್ಮಗಳನ್ನು ದ್ವೇಷಿಸಬೇಕು ಎಂದು ಹೇಳಿಲ್ಲ. ಕೆಲವು ವ್ಯಕ್ತಿಗಳಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಎಲ್ಲ ಧರ್ಮದಲ್ಲೂ ಅಶಾಂತಿ ಮೂಡಿಸುವವರು ಇದ್ದೇ ಇರುತ್ತಾರೆ. ಅಂತಹ ವ್ಯಕ್ತಿಗಳಿಗೆ ಬುದ್ಧಿ ಹೇಳಿ ತಿದ್ದುವ ಕೆಲಸವನ್ನು ಆಯಾ ಧರ್ಮದ ಮುಖಂಡರೇ ಮಾಡಬೇಕು’ ಎಂದರು.
ಕಾರ್ಯಕ್ರಮದ ಆಯೋಜಕ ಕೆ.ಪಿ. ಶ್ರೀಪಾಲ್, ‘ಕೆಲವು ತಿಂಗಳುಗಳಿಂದ ನಮ್ಮ ನಗರ ಮತ್ತು ರಾಜ್ಯದಲ್ಲಿ ಉಂಟಾಗುತ್ತಿರುವ ಕೋಮು ದ್ವೇಷದ ಭಾವನೆಗಳು ಸಮಾಜದ ಶಾಂತಿಗೆ ಧಕ್ಕೆ ತಂದಿವೆ. ಸಹೋದರರಂತೆ ಇದ್ದ ನಾವುಗಳು ಶತ್ರುಗಳಂತೆ ಒಬ್ಬರನೊಬ್ವರು ದ್ವೇಷಿಸುವ ಪರಿಸ್ಥಿತಿ ಬಂದಿದೆ. ಮತೀಯ ದ್ವೇಷ ಅಳಿಯಬೇಕು. ಸೌರ್ಹಾದತೆ ಬೆಳೆಯಬೇಕು. ಸೌಹಾರ್ದ ಸಹಭೋಜನ ಇದಕ್ಕೆ ಮುನ್ನುಡಿಯಾಗಲಿ’ ಎಂದರು.
ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ದಸಂಸ ಮುಖಂಡ ಎಂ. ಗುರುಮೂರ್ತಿ, ಎಸ್.ಬಿ. ಅಶೋಕ್ಕುಮಾರ್, ಎಸ್. ಕುಮಾರ್, ಎಚ್. ಫಾಲಾಕ್ಷಿ, ಶೇರಾಜ್ ಅಹಮದ್ ಸಿದ್ದಿಕಿ, ಮೌಲಾನಾ ಶಾ ಅಬ್ದುಲ್ ಹಮೀದ್, ಎನ್. ಮಂಜುನಾಥ್, ಬಿ.ಜಿ. ಶಿವಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.