
ಉದ್ಯಾನ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ 16 ಮನೆಗಳ ತೆರವು
ದಾವಣಗೆರೆ: ಇಲ್ಲಿನ ವಿಜಯನಗರದ ಉದ್ಯಾನವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ 16 ಮನೆಗಳನ್ನು ಮಹಾನಗರ ಪಾಲಿಕೆ ಮಂಗಳವಾರ ತೆರವುಗೊಳಿಸಿತು.
ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಮನೆಗಳನ್ನು ತೆರವುಗೊಳಿಸುವುದಕ್ಕೆ ಹಲವು ಕುಟುಂಬಗಳು ವಿರೋಧ ವ್ಯಕ್ತಪಡಿಸಿದವು.
ಕೊಂಡಜ್ಜಿ ರಸ್ತೆಯಲ್ಲಿರುವ ವಿಜಯನಗರದಲ್ಲಿ ರಾಮಪ್ಪ ಅವರ ಕುಟುಂಬ ಉದ್ಯಾನ ಜಾಗವನ್ನು ಒತ್ತುವರಿ ಮಾಡಿಕೊಂಡು 16 ಮನೆಗಳನ್ನು ನಿರ್ಮಿಸಿತ್ತು. ಒತ್ತುವರಿ ಖಚಿತವಾದ ಬಳಿಕ ಮನೆಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಸೂಚಿಸಿತ್ತು. ಇದರಲ್ಲಿ ಮೂರು ಮನೆಗಳನ್ನು ಪಾಲಿಕೆ ಸಿಬ್ಬಂದಿ ಕೆಲ ದಿನಗಳ ಹಿಂದೆ ತೆರವುಗೊಳಿಸಿ ಉಳಿದ ಮನೆಗಳಿಗೆ ಕಾಲಾವಕಾಶ ನೀಡಿದ್ದರು. ನಿಗದಿತ ಕಾಲಮಿತಿಯಲ್ಲಿ ಮನೆ ತೆರವು ಮಾಡದಿರುವುದರಿಂದ ಜೆಸಿಬಿ ಮೂಲಕ ತೆರವು ಮಾಡಲಾಯಿತು.
‘ನಮ್ಮದೇ ಜಮೀನಿನಲ್ಲಿ 25 ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡಿದ್ದೆವು. ಮನೆಗಳಿಗೆ ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಎಲ್ಲ ದಾಖಲೆಗಳಿವೆ. ಮನೆ ಕಂದಾಯ ಕೂಡ ಕಟ್ಟಲಾಗಿದೆ. ಐದು ತಿಂಗಳಿನಿಂದ ಇದನ್ನು ಸರ್ಕಾರಿ ಜಾಗ, ಉದ್ಯಾನ ಒತ್ತುವರಿ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಮನೆ ಮಾಲೀಕ ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
‘ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ಮನೆಗಳನ್ನು ತೆರವುಗೊಳಿಸಿದ್ದಾರೆ. ಮಹಿಳೆಯರನ್ನು ಪೊಲೀಸರು ಮನೆಯಿಂದ ಹೊರಗೆಳೆದು ದೌರ್ಜನ್ಯ ಎಸೆಗಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.