ದಾವಣಗೆರೆ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಿ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘ ಇಲ್ಲಿನ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದ್ದು, ರಾಷ್ಟ್ರಪತಿಗಳು ಈ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ‘ಹಲವು ದಿನಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಸೌಜನ್ಯಕ್ಕಾದರೂ ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರು ಸಮಸ್ಯೆ ಆಲಿಸಿಲ್ಲ’ ಎಂದು ದೂರಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ‘ಜಾಗತಿಕ ನಾಯಕ ಎಂದು ಹೇಳಿಕೊಳ್ಳುವ ಮೋದಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಮೋದಿಯವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಹಾಗೂ ಮಹಿಳಾ ಸಮಸ್ಯೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ಸ್ಮೃತಿ ಇರಾನಿ ಅವರು ಸಚಿವರಾಗುವ ಮೊದಲು ಹಣದುಬ್ಬರ, ಮಹಿಳೆಯರ ಸುರಕ್ಷತೆ ಮತ್ತು ನಿರುದ್ಯೋಗದಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು, ಮೋದಿ ಸರ್ಕಾರದ ಮತ್ತೊಬ್ಬ ಮಹಿಳಾ ಸಚಿವೆ ಮೀನಾಕ್ಷಿ ಲೇಖಿ ಅವರು ಮೌನವಾಗಿರುವುದನ್ನು ನೋಡಿದರೆ ಅತ್ಯಾಚಾರಿಗಳ ಬೆಂಬಲಕ್ಕೆ ಇಡೀ ಕೇಂದ್ರ ಸರ್ಕಾರವೇ ನಿಂತಿದೆಯಾ’ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕುಸ್ತಿಪಟುಗಳಾದ ಹುಸೇನ್ ಪೈಲ್ವಾನ್, ಗಣೇಶ್, ಕ್ರೀಡಾಪಟುಗಳಾದ ಎಲ್.ಎಂ.ಪ್ರಕಾಶ್, ಗೋಪಾಲಕೃಷ್ಣ, ಗೋಪಿ ಅಂತು, ಕ್ರಿಕೆಟ್ ತಿಮ್ಮೇಶ್, ಕುಮಾರ್, ಶ್ರೀಕಾಂತ್ ಬಗೇರ, ರಾಜು ಭಂಡಾರಿ, ಅಕ್ರಂಬಾಷಾ, ಅಲಿ ರೆಹಮತ್, ರತನ್, ಲೋಕಿಕೆರೆ ಪ್ರದೀಪ್, ಅರುಣ್, ಚೈತನ್ಯ ಕುಮಾರ್, ಲಾಲ್ ಆರೀಫ್, ಹರೀಶ್, ಮೊಟ್ಟೆ ದಾದಾಪೀರ್, ಬಸವರಾಜ ಆವರಗೆರೆ, ಮಧು ಪವಾರ್, ಹನುಮಂತಪ್ಪ, ಸುರೇಶ್ ಜಾಧವ್, ಸೈಯದ್ ಜಿಕ್ರಿಯಾ, ಆರೋಗ್ಯಸ್ವಾಮಿ, ಪ್ರವೀಣ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.