ದಾವಣಗೆರೆ: ‘ಆಹಾರ ಕಿಟ್ ವಿತರಣೆ ಸಂಬಂಧ ಶೇಖರಪ್ಪನಗರದಲ್ಲಿ ಶ್ರೀಕಾಂತ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಜಿ ಶಾಸಕ ಎಂ. ಬಸವರಾಜನಾಯ್ಕ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರ’ ಎಂದು ಸೇವಾಲಾಲ್ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎನ್.ವೆಂಕಟೇಶನಾಯ್ಕ ತಿಳಿಸಿದರು.
‘ರಾಜಕೀಯ ಕಾರಣಕ್ಕೋಸ್ಕರ ಇದನ್ನು ಬಳಸಿಕೊಂಡಿದ್ದು, ಶೇಖರಪ್ಪ ನಗರದಲ್ಲಿ ಬಂಜಾರ ಸಮುದಾಯದ ಸುಮಾರು 40 ಮನೆಗಳು ಇದ್ದು, ಎಲ್ಲರೂ ಬೇರೆ ಸಮಾಜದವರೊಂದಿಗೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಮಸೀದಿ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಮನೆ ಮಾರಾಟ ಮಾಡುವಂತೆ ಬೆದರಿಕೆ ಹಾಕಿರುವುದು ಸುಳ್ಳು’ ಎಂದರು.
‘ಮುಖಂಡ ದಾದಾಪೀರ್ ಮತ್ತು ಸಂಗಡಿಗರು ಯಾವುದೇ ರೀತಿಯ ಜಾತಿ ಮತ ನೋಡದೇ ಕಿಟ್ ನೀಡಲು ಮುಂದಾಗಿದ್ದಾರೆ. ಮಾಜಿ ಶಾಸಕರು ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಎಲ್ಲಾ ಜನಾಂಗದ ಮುಖಂಡರನ್ನು ಒಗ್ಗೂಡಿಸಿ ಸಭೆ ನಡೆಸಬಹುದಿತ್ತು. ಅವರ ನೇತೃತ್ವದಲ್ಲಿ ಸಭೆ ನಡೆಸಿ ಇತ್ಯರ್ಥ ಮಾಡಬೇಕು. ಅಲ್ಲದೇ ಠಾಣೆಯಲ್ಲಿ ಹಾಕಿರುವ ದೂರನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಮುಖಂಡ ಲಿಂಗಪ್ಪ ಮಾತನಾಡಿ, ‘1970ರಿಂದಲೂ ಇಲ್ಲಿ ನಾಲ್ಕರಿಂದ ಐದು ಸಮಾಜಗಳು ಇಲ್ಲಿ ವಾಸಿಸುತ್ತಿದ್ದೇವೆ. ಅಂದಿನಿಂದ ಜಾತಿ ಗಲಭೆ ನಡೆದಿಲ್ಲ. ಮಾಜಿ ಶಾಸಕರು ನಮ್ಮನ್ನು ವಿಚಾರಿಸಿದ್ದರೆ ಮಾಹಿತಿ ನೀಡುತ್ತಿದ್ದೆವು’ ಎಂದು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಉಮೇಶ್ ನಾಯ್ಕ, ಉಪಾಧ್ಯಕ್ಷ ರಾಜುನಾಯ್ಕ, ಸಹಕಾರ್ಯದರ್ಶಿ ಮಂಜನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.