ADVERTISEMENT

ಬಾಕಿ ಶಿಷ್ಯವೇತನ: ಲಿಖಿತ ಭರವಸೆ ಸಿಗದಿದ್ದರೆ ಮತ್ತೆ ಹೋರಾಟ

ದಾವಣಗೆರೆ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 12:57 IST
Last Updated 16 ಜುಲೈ 2020, 12:57 IST

ದಾವಣಗೆರೆ: 16 ತಿಂಗಳ ಬಾಕಿ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಜುಲೈ 20ರಿಂದ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ. ಹರೀಶ್‌ ಹೇಳಿದರು.

‘ಶಿಷ್ಯವೇತನ ನೀಡುವ ಸಂಬಂಧ ಆಶ್ವಾಸನೆ ಮಾತ್ರ ಸಿಕ್ಕಿದೆ. ಆದರೆ ಯಾರು ಶಿಷ್ಯವೇತನ ನೀಡುತ್ತಾರೆ ಎಂಬ ಬಗ್ಗೆ ನಮಗೆ ತಿಳಿಸಿಲ್ಲ. ಹಾಗಾಗಿ ಶಿಷ್ಯವೇತನ ನೀಡುವ ಸಂಬಂಧ ಸರ್ಕಾರ ಲಿಖಿತ ಭರವಸೆ ನೀಡಬೇಕು. ಧರಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಹಿಂಪಡೆದಿಲ್ಲ. ಒಂದು ವೇಳೆ ಲಿಖಿತ ಭರವಸೆ ಸಿಗದಿದ್ದರೆ ಸೋಮವಾರದಿಂದ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಂದು ವರ್ಷ ಶಿಷ್ಯವೇತನ ನೀಡಿ. ಈಗ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಶಿಷ್ಯವೇತನ ಸರ್ಕಾರದ ಮೂಲಕವೇ ನಮಗೆ ಬರಬೇಕು. ಒಂದು ವೇಳೆ ಕಾಲೇಜು ಆಡಳಿತ ಮಂಡಳಿ ನೀಡುವುದಾದರೆ ಸರ್ಕಾರಕ್ಕೆ ನೀಡಿ ಬಳಿಕ ಸರ್ಕಾರದಿಂದಲೇ ನಮಗೆ ಬರಬೇಕು’ ಎಂದರು.

ADVERTISEMENT

‘ಬಾಕಿ ಇರುವ ಶಿಷ್ಯವೇತನ ನೀಡುವ ಸಂಬಂಧ ಮಾತ್ರ ಸ್ಪಂದನೆ ದೊರಕಿದೆ. 2020ರಜುಲೈ ತಿಂಗಳಿನಿಂದ ಕೋರ್ಸ್ ಮುಗಿಯುವವರೆಗಿನ ಶಿಷ್ಯವೇತನವನ್ನು ಯಾರು ನೀಡುತ್ತಾರೆ ಎಂಬ ಬೇಡಿಕೆ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಈ ಬಗ್ಗೆಯೂ ಲಿಖಿತ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು.

ಡಾ. ಹಿತಾ, ‘ಮುಂದಿನ ಸಾಲಿನಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೂ ಈ ವಿಷಯದಲ್ಲಿ ಅನ್ಯಾಯ ಆಗಬಾರದು. 2021ನೇ ಸಾಲಿನ ವಿದ್ಯಾರ್ಥಿಗಳಿಗೂ ಈಗಿನ ನೀತಿಯೇ ಅನ್ವಯಿಸಬೇಕು. ಅವರಿಗೂ ಶಿಷ್ಯವೇತನ ನೀಡುವ ಸಂಬಂಧ ತಿಳಿಸಬೇಕು. ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ನಿಗದಿ ಮಾಡಿರುವ ಶಿಷ್ಯವೇತನವನ್ನೇ ನಮಗೂ ನೀಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಸುಧಾಕರ, ಡಾ. ನಿಧಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.