ದಾವಣಗೆರೆ: ಜಿಲ್ಲೆಯ ರಾಣೇಬೆನ್ನೂರು ಸಮೀಪದ ಚಳಗೇರಿ ಬಳಿ ಬುಧವಾರ ರಾತ್ರಿ ಇಬ್ಬರು ಬುದ್ದಿಮಾಂದ್ಯ ಮಕ್ಕಳನ್ನು ತಂದೆಯೇ ಕೊಲೆ ಮಾಡಿದ್ದಾರೆ.
ನಗರದ ಆಂಜನೇಯ ಬಡಾವಣೆಯ ನಿವಾಸಿ ಅಮರ್ ಕೊಲೆ ಮಾಡಿದ ವ್ಯಕ್ತಿ. ನಾಲ್ಕೂವರೆ ವರ್ಷದ ಅವಳಿ ಮಕ್ಕಳಾದ ಅದ್ವೈತ್ ಹಾಗೂ ಅನ್ವಿತ್ ಕೊಲೆಯಾದವರು.
ಗೋಕಾಕ್ ಮೂಲದ ಅಮರ್ ಹರಿಹರ ಸಮೀಪದ ಕಾರ್ಖಾನೆಯೊಂದರಲ್ಲಿ ಕೆಮಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಜಯಲಕ್ಷ್ಮಿ ತಮ್ಮ ತಂದೆಯ ಸಾವಿನ ಹಿನ್ನೆಲೆಯಲ್ಲಿ ತವರೂರು ವಿಜಯಪುರಕ್ಕೆ ತೆರಳಿದ್ದರು. ದಾವಣಗೆರೆಯ ವಿದ್ಯಾನಗರ ಠಾಣೆಯ ಪೊಲೀಸರು ಆರೋಪಿ ತಂದೆಯನ್ನು ಗುರುವಾರ ಬಂಧಿಸಿದ್ದಾರೆ.
ಅಜ್ಜಿ ಸಾವಿತ್ರಮ್ಮ ಅವರ ಜೊತೆಯಲ್ಲಿ ಮಲಗಿದ್ದ ಇಬ್ಬರೂ ಮಕ್ಕಳನ್ನು ರಾತ್ರಿ ಕಾರ್ನಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ಸಮೀಪದ ಟೋಲ್ ಹತ್ತಿರ ಕರೆದುಕೊಂಡು ಹೋದ ಅಮರ್, ಅಲ್ಲಿನ ಸರ್ವೀಸ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಮಕ್ಕಳ ಬಾಯಿಗೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
‘ಬುದ್ದಿಮಾಂದ್ಯರಾದ ಮಕ್ಕಳಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಎಲ್ಲದಕ್ಕೂ ಹಠ ಮಾಡುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದೇನೆ’ ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.