ADVERTISEMENT

ದಾವಣಗೆರೆ: ಅನುದಾನ ದುರ್ಬಳಕೆ ಸುಳಿಯಲ್ಲಿ 9 ಗ್ರಾ.ಪಂ.

ಅಧ್ಯಕ್ಷರ ವಿರುದ್ಧ ವಿಚಾರಣೆ ಬಾಕಿ, ಒಬ್ಬ ಸದಸ್ಯ, ಮೂವರು ಪಿಡಿಒಗಳಿಗೆ ಶಿಕ್ಷೆ

ಜಿ.ಬಿ.ನಾಗರಾಜ್
Published 24 ಫೆಬ್ರುವರಿ 2026, 5:42 IST
Last Updated 24 ಫೆಬ್ರುವರಿ 2026, 5:42 IST
<div class="paragraphs"><p>ಅನುದಾನ (ಸಾಂರ್ಭಿಕ ಚಿತ್ರ)</p></div>

ಅನುದಾನ (ಸಾಂರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ದಾವಣಗೆರೆ: ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಐದು ವರ್ಷಗಳ ಅಧಿಕಾರವಧಿ ಫೆ.19ಕ್ಕೆ ಮುಕ್ತಾಯವಾಗಿದೆ. ಸದಸ್ಯರ ಅವಧಿ ಪೂರ್ಣಗೊಂಡಿರುವ 9 ಪಂಚಾಯಿತಿಗಳು ಅನುದಾನ ದುರ್ಬಳಕೆಯ ಸುಳಿಗೆ ಸಿಲುಕಿದ್ದು, ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ವಿಚಾರಣೆ ಎದುರಿಸುತ್ತಿದ್ದಾರೆ.

ADVERTISEMENT

ಅನುದಾನ, ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೂವರು ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಪಂಚಾಯಿತಿಯ ಚುನಾಯಿತ ಸದಸ್ಯರೊಬ್ಬರನ್ನು ಅನರ್ಹಗೊಳಿಸಲಾಗಿದೆ. 2 ಗ್ರಾಮ ಪಂಚಾಯಿತಿಯ ಮೂವರು ಅಧ್ಯಕ್ಷರ ವಿರುದ್ಧ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಬಾಕಿ ಇದೆ.

ಜಿಲ್ಲೆಯಲ್ಲಿ 194 ಗ್ರಾಮ ಪಂಚಾಯಿತಿಗಳಿದ್ದು, 175 ಪಂಚಾಯಿತಿಗಳ ಅವಧಿ ಕೊನೆಯಾಗಿದೆ. ಈ ಎಲ್ಲ ಪಂಚಾಯಿತಿಗಳಲ್ಲಿ ಕಳೆದ ಅವಧಿಯಲ್ಲಿ ಅನುದಾನ ಹಾಗೂ ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಕುರಿತು ತನಿಖೆ ನಡೆಸಿದ ಗ್ರಾಮೀಣ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಪಿಡಿಒಗಳ ವಿರುದ್ಧ ಕ್ರಮ ಜರುಗಿಸಿದೆ.

ಜಂಟಿ ಅನುಮೋದನೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುದಾನ ಬಳಕೆಗೆ ಅನುಮೋದನೆ ನೀಡುವ ಅಧಿಕಾರವನ್ನು ಅಧ್ಯಕ್ಷರು ಹಾಗೂ ಪಿಡಿಒ ಹೊಂದಿದ್ದಾರೆ. ಉದ್ಯೋಗ ಖಾತ್ರಿ, ವಸತಿ ಯೋಜನೆ, ತೆರಿಗೆ, ನಿಧಿ, ಖರ್ಚು–ವೆಚ್ಚಗಳಿಗೆ ಇಬ್ಬರು ಜಂಟಿ ಸಹಿ ಹಾಕಬೇಕು. ಕೆಲ ಪಂಚಾಯಿತಿಗಳಲ್ಲಿ ಇಬ್ಬರು ಜಂಟಿಯಾಗಿ ಆರ್ಥಿಕ ಅನುಮೋದನೆಗಳನ್ನು ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಕೆಲವೆಡೆ ಅಧ್ಯಕ್ಷರು ಹಾಗೂ ಪಿಡಿಒ ಪ್ರತ್ಯೇಕವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೈಗಾರಿಕೆ, ವಾಣಿಜ್ಯ ಮಳಿಗೆ, ಅಂಗಡಿ, ಗಣಿಗಾರಿಕೆ, ಹೋಟೆಲ್‌ಗೆ ಪರವಾನಗಿ ನೀಡುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇಂತಹ ಸಂದರ್ಭದಲ್ಲಿಯೂ ಅಧಿಕಾರ ಹಾಗೂ ಹಣಕಾಸಿನ ದುರ್ಬಳಕೆ ಆಗಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ. ಆರ್ಥಿಕ ಅಪರಾಧಗಳಿಗೆ ಈ ಮೊದಲು ಪಿಡಿಒಗಳನ್ನು ಮಾತ್ರ ಹೊಣೆ ಮಾಡಲಾಗುತ್ತಿತ್ತು. 2024ರಿಂದ ಈಚೆಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಕೂಡ ಇದರ ವ್ಯಾಪ್ತಿಗೆ ತರಲಾಗಿದೆ.

ಲಕ್ಷಾಂತರ ರೂಪಾಯಿ ಅವ್ಯವಹಾರ: ಆರ್ಥಿಕ ಅವ್ಯಹಾರದ ಆರೋಪ ಎದುರಿಸುತ್ತಿರುವ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಆಗಿದೆ. ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಹಾಗೂ ಹೊನ್ನಾಳಿ ತಾಲ್ಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಪಿಡಿಒ ಷಾಮೀಲಾಗಿ ₹ 62 ಲಕ್ಷಕ್ಕೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹುಲಿಕಟ್ಟೆ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಪುತ್ರನ ಹೆಸರಿಗೆ 3 ಬಾರಿ ಚೆಕ್‌ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.