ಜಗಳೂರು: ನ್ಯಾಮತಿಯಲ್ಲಿ ಈಚೆಗೆ ನಡೆದ ಪ್ರತಿಭಟನೆಯಲ್ಲಿ ಸಂತ ಸೇವಾಲಾಲ್ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಬಗ್ಗೆ ಅವಹೇಳನ ಮಾಡಿದ್ದು ಖಂಡನೀಯ ಎಂದು ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪುರುಷೋತ್ತಮನಾಯ್ಕ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದಾಶಿವ ಆಯೋಗದ ವರದಿ ಅವೈಜ್ಞಾನಿಕ. ದಲಿತರನ್ನು ಒಗ್ಗಟ್ಟನ್ನು ಒಡೆಯುವ ಹುನ್ನಾರವಾಗಿದೆ. ವರದಿಗೆ ಪರಿಶಿಷ್ಟ ಜಾತಿಯಲ್ಲಿರುವ ಶೇ 90ರಷ್ಟು ಜನರ ವಿರೋಧವಿದೆ. ಶೋಷಿತ ಸಮುದಾಯಗಳನ್ನು ಒಡೆದು ಆಳುವಂತಹ ಸಂಚು ಇದು. ವರದಿ ಜಾರಿಯಾದರೆ ದಲಿತರ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಸಾಮರಸ್ಯ ಹಾಳುಮಾಡಿದಂತಾಗುತ್ತದೆ’ ಎಂದು ದೂರಿದರು.
‘ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗೆ ಕಲ್ಪಿಸಿದ ಶೇ 15ರಷ್ಟು ಮೀಸಲಾತಿಯಡಿ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿ ಹಲವು ಪರಿಶಿಷ್ಟ ಜಾತಿಗಳು ಸೌಲಭ್ಯ ಪಡೆಯುತ್ತಿವೆ. ಈಚೆಗೆ ಸಹೋದರ ಸಮಾಜವಾದ ಮಾದಿಗ ಸಮಾಜದ ಮುಖಂಡರು ಸಚಿವ ನಾರಾಯಣಸ್ವಾಮಿ ಅವರ ಬಗ್ಗೆ ಲಂಬಾಣಿ ಸಮುದಾಯದವರು ಅಸೂಯೆ ಭಾವನೆ ಹೊಂದಿದ್ದಾರೆ ಎಂದು ಆರೋಪಿಸಿರುವುದು ಸರಿಯಲ್ಲ. ನಮಗೂ ನಮ್ಮ ಸಹೋದರ ಸಮಾಜದ ಸಚಿವರ ಬಗ್ಗೆ ಅಭಿಮಾನವಿದೆ’ ಎಂದು ಅವರು ಹೇಳಿದರು.
ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ನಾಯ್ಕ, ಮೂರ್ತಿನಾಯ್ಕ ದತ್ತ, ಹರೀಶ್ ಕೃಷ್ಣನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.