ADVERTISEMENT

ದಾವಣಗೆರೆ: ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬೇಡಿ

ದಾವಣಗೆರೆ ವಿ.ವಿ. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:50 IST
Last Updated 31 ಜನವರಿ 2026, 6:50 IST
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿನಡೆದ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಎಂ.ರಾಮಪ್ಪ, ಸಿ.ಎಚ್. ಮುರುಗೇಂದ್ರಪ್ಪ, ಎಲ್. ರೇವಣಸಿದ್ದಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿನಡೆದ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಎಂ.ರಾಮಪ್ಪ, ಸಿ.ಎಚ್. ಮುರುಗೇಂದ್ರಪ್ಪ, ಎಲ್. ರೇವಣಸಿದ್ದಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ವಿಶ್ವವಿದ್ಯಾಲಯದ ಪದವೀಧರರ ಕನಸುಗಳು ‘ಕ್ಯಾಂಪಸ್‌ ಆಯ್ಕೆ’ಗೆ ಸೀಮಿತ ಆಗಬಾರದು. ಅವರು ಹೊಸ ಆಲೋಚನೆಗಳತ್ತ ತೆರೆದುಕೊಳ್ಳಬೇಕು. ವೃತ್ತಿ ಕೌಶಲ್ಯ ಬೆಳೆಸಿಕೊಂಡು ನವೋದ್ಯಮ ಸ್ಥಾಪನೆಗೆ ಮುಂದಾಗಬೇಕು’ ಎಂದು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಲಹೆ ನೀಡಿದರು.

ಇಲ್ಲಿನ ತೋಳಹುಣಸೆಯ ಶಿವಗಂಗೋತ್ರಿಯಲ್ಲಿ ಶುಕ್ರವಾರ ನಡೆದ ದಾವಣಗೆರೆ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ನವೋದ್ಯಮಗಳ ಪ್ರಪಂಚದಲ್ಲಿ ಸೋಲು ಅಂತ್ಯವಲ್ಲ, ಬದಲಿಗೆ ಅದೊಂದು ಮೌಲ್ಯಯುತ ಕಲಿಕೆ. ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಸೋಲಿಗೆ ಹೆದರಬಾರದು. ‘ವಿಕಸಿತ ಭಾರತ’ದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ದೇಶವು ನಿಗದಿತ ಗುರಿ ತಲುಪಲು ಯುವಸಮೂಹದ ಜ್ಞಾನ, ಪರಿಶ್ರಮ ಮತ್ತು ಕರ್ತವ್ಯ ಪ್ರಜ್ಞೆ ನಿರ್ಣಾಯಕ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇದು ನಾವೀನ್ಯತೆ ಮತ್ತು ಸ್ಪರ್ಧಾತ್ಮಕ ಯುಗ. ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಮತ್ತು ಸುಧಾರಿತ ತಂತ್ರಜ್ಞಾನಗಳು ಜಗತ್ತಿಗೆ ಹೊಸ ಆಯಾಮ ನೀಡುತ್ತಿವೆ. ಸುಶಿಕ್ಷಿತ ಯುವಕರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲರು. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಹೊಸ ವಿಷಯಗಳನ್ನು ಕಲಿಯುತ್ತ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಣ್ಣ ಆಲೋಚನೆಗಳು ಕೂಡ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಲ್ಲವು’ ಎಂದರು.

‘ಯುವಶಕ್ತಿಯೇ ರಾಷ್ಟ್ರದ ಅಭಿವೃದ್ಧಿಯ ಮೂಲ. ರಾಷ್ಟ್ರಕ್ಕೆ ಯುವಸಮೂಹದ ಅಗತ್ಯವಿದೆ. ಪ್ರಶ್ನೆಗಳನ್ನು ಕೇಳುತ್ತ ಕುತೂಹಲ ಜಾಗೃತಗೊಳಿಸಿಕೊಳ್ಳುವವರು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬಲ್ಲರು. ಸವಾಲುಗಳನ್ನು ಎದುರಿಸುತ್ತ ದೇಶದಲ್ಲಿ ನಿಜವಾದ ಬದಲಾವಣೆಗೆ ಮುನ್ನುಡಿ ಬರೆಯಬಲ್ಲರು’ ಎಂದು ಪ್ರತಿಪಾದಿಸಿದರು.

‘ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಸಂಭ್ರಮವನ್ನು ಭಾರತವು 2047ಕ್ಕೆ ಆಚರಿಸಲಿದೆ. ಈ ದೇಶದ ನಾಯಕತ್ವ ಯುವಸಮೂಹದ ಕೈಯಲ್ಲಿದೆ. ಪದವೀಧರರ ಪ್ರಯತ್ನದ ಫಲವಾಗಿ ತಂತ್ರಜ್ಞಾನದಲ್ಲಿ ಭಾರತವು ವಿಶ್ವದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ’ ಎಂದು ಹೇಳಿದರು.

‘ಘಟಿಕೋತ್ಸವ ವಿದ್ಯಾರ್ಥಿ ಜೀವನದ ಪ್ರಮುಖ ಮೈಲಿಗಲ್ಲು. ಹಲವು ವರ್ಷಗಳಿಂದ ಪಟ್ಟ ಶ್ರಮ, ಶಿಸ್ತು ಮತ್ತು ಸಂಕಲ್ಪಕ್ಕೆ ಇದು ಸಾಕ್ಷಿ. ವಿದ್ಯಾರ್ಥಿಗಳು ಪಡೆದಿರುವ ಪದವಿಯು ಸಂಶೋಧನೆ, ಶಿಸ್ತು ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಜ್ಞಾನ ಮತ್ತು ಪ್ರತಿಭೆಯನ್ನು ವೈಯಕ್ತಿಕ ಅಭಿವೃದ್ಧಿಗಷ್ಟೇ ಅಲ್ಲದೆ, ಸಮಾಜ, ರಾಜ್ಯ ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಬಳಸಬೇಕಿದೆ. ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ದಾವಣಗೆರೆ ವಿಶ್ವವಿದ್ಯಾಲಯ ಅಲ್ಪಾವಧಿಯಲ್ಲಿ ಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಮತ್ತು ಸಾಮಾಜಿಕ ಬದ್ಧತೆಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ವಿಶ್ವವಿದ್ಯಾಲಯವು ಕೇವಲ ಪದವಿಗಳನ್ನು ನೀಡುವ ಕೇಂದ್ರವಲ್ಲ, ಬದಲಿಗೆ ಜವಾಬ್ದಾರಿಯುತ ನಾಗರಿಕರನ್ನು, ನವೀನ ಚಿಂತಕರನ್ನು ಮತ್ತು ರಾಷ್ಟ್ರ ನಿರ್ಮಾಣ ಮಾಡುವವರನ್ನು ರೂಪಿಸುವ ಪ್ರಬಲ ಸಂಸ್ಥೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣಸಿದ್ದಯ್ಯ, ಶೈಕ್ಷಣಿಕ ಸಂಘಟಕ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ ಮತ್ತು ಸಮಾಜ ಸೇವಕ ಎಂ. ರಾಮಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಕುಲಸಚಿವ ಎಸ್.ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎ. ರಮೇಶ್ ಹಾಜರಿದ್ದರು.

ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿನಡೆದ 13ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಅತಿಥಿಗಳು ವಿದ್ಯಾರ್ಥಿಗಳು ಮತ್ತು ಪಾಲಕರು –ಪ್ರಜಾವಾಣಿ ಚಿತ್ರ
ವಿಶ್ವವಿದ್ಯಾಲಯ ಸ್ಥಾಪನೆಯಾದ ಒಂದೂವರೆ ದಶಕದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪದವಿಯ ಜೊತೆಗೆ ವೃತ್ತಿ ಮಾರ್ಗದರ್ಶನ ನೀಡಲಾಗುತ್ತಿದೆ.
– ಪ್ರೊ.ಬಿ.ಡಿ.ಕುಂಬಾರ, ಕುಲಪತಿ ದಾವಣಗೆರೆ ವಿಶ್ವವಿದ್ಯಾಲಯ

‘ಹೆಚ್ಚದಿರಲಿ ಋಣಾತ್ಮಕ ಬದಲಾವಣೆ’

ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಿದ್ದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಕಾರ್ಯದರ್ಶಿ ವಾಸುದೇವ ಆತ್ರೆ ಘಟಿಕೋತ್ಸವಕ್ಕೆ ಗೈರಾಗಿದ್ದರು. ಅವರ ಲಿಖಿತ ಭಾಷಣವನ್ನು ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಲೋಕೇಶ್ ಓದಿದರು.

‘ಪ್ರಕೃತಿಯ ಮೇಲೆ ಮಾನವ ಸಂಪೂರ್ಣ ಅವಲಂಬಿತನಾಗಿದ್ದಾನೆ. ಭೂಮಿಯನ್ನು ಧನಾತ್ಮಕ ಮತ್ತು ಋಣಾತ್ಮಕ ದಾರಿಯಲ್ಲಿ ಬದಲಿಸಿದ್ದಾನೆ. ಋಣಾತ್ಮಕ ಬದಲಾವಣೆಗಳು ಧನಾತ್ಮಕ ಬದಲಾವಣೆಗಳನ್ನು ಮೀರದಂತೆ ನೋಡಿಕೊಳ್ಳುವ ಸವಾಲು ಎದುರಾಗಿದೆ’ ಎಂದು ಆತ್ರೆ ಅಭಿಪ್ರಾಯಪಟ್ಟಿದ್ದಾರೆ.

‘ಹವಮಾನ ನೀರು ಹಾಗೂ ಅರಣ್ಯದ ಬಳಕೆ ಸಮುದ್ರದ ಆಮ್ಲೀಕರಣದ ಸುರಕ್ಷಿತ ಮಿತಿಯನ್ನು ಮೀರಲಾಗಿದೆ. ಕೈಗಾರಿಕೆ ಮತ್ತು ರಾಸಾಯನಿಕ ಮಾಲಿನ್ಯ ಹೆಚ್ಚುತ್ತಿದೆ. ಈ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಹಾರವಿದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.