ADVERTISEMENT

ವೈದ್ಯಕೀಯ ವಿದ್ಯಾರ್ಥಿಗೆ ಡಿಸಿ ತರಾಟೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:29 IST
Last Updated 21 ಏಪ್ರಿಲ್ 2021, 5:29 IST
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕೊರೊನಾ ಜಾಗೃತಿ ಮೂಡಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕೊರೊನಾ ಜಾಗೃತಿ ಮೂಡಿಸಿದರು.   

ದಾವಣಗೆರೆ: ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಸಂಜೆ ರಾಂ ಅಂಡ್ ಕೊ ವೃತ್ತ, ಡೆಂಟಲ್ ಕಾಲೇಜು ರಸ್ತೆ, ಎಂಸಿಸಿ ‘ಬಿ’ ಬ್ಲಾಕ್, ಬಿಐಇಟಿ ರಸ್ತೆಯಲ್ಲಿ ಸಂಚರಿಸಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.

ಬಾಯ್ಸ್ ಹಾಸ್ಟೆಲ್ ರಸ್ತೆಯಲ್ಲಿ ನಿಂತಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬರಿಗೆ ‘ಮೆಡಿಕಲ್ ಓದುತ್ತೀಯಾ ಮಾಸ್ಕ್ ಧರಿಸಬೇಕು ಎನ್ನುವುದು ಗೊತ್ತಿಲ್ಲವಾ? ಮಾಸ್ಕ್ ಮಹತ್ವ ಗೊತ್ತಾ?ಜಾಣರಾದ ನೀವೆ ಮಾಸ್ಕ್ ಧರಿಸದಿದ್ದರೆ, ತರಕಾರಿ ಮಾರಾಟ ಮಾಡುವವರು ತಿಳಿದಿರುತ್ತದೆಯೇ? ಚಿಗಟೇರಿ ಆಸ್ಪತ್ರೆಯಲ್ಲಿ ಜಾಗವಿಲ್ಲ, ಕೋರೋನಾ ಬಂದ್ರೆ ಎಲ್ಲಿ ಹೋಗ್ತಿಯಾ ಎಂದು ಎಚ್ಚರಿಸಿದರು.

ADVERTISEMENT

ಕೆಲವು ಹೋಟೆಲ್‌ಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ಡಿಸಿ ಗ್ಲೌಸ್ ಬಳಸಿ ಆಹಾರ ಪದಾರ್ಥ ಸರಬರಾಜು ಮಾಡಬೇಕು ಎಂದು ಸೂಚಿಸಿದರು. ಅಲ್ಲದೇ ವೈದ್ಯರೊಬ್ಬರು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದ ಕಾರನ್ನು ನೋಡಿ, ನೀವೇ ಅಡ್ಡಲಾಗಿ ಕಾರು ನಿಲ್ಲಿಸಿದರೆ ಹೇಗೆ? ತಪ್ಪಲ್ಲವೇ ಎಂದು ಪ್ರಶ್ನಿಸಿದರು.

ಮಕ್ಕಳನ್ನು ಹೊರಗೆ ಕರೆದುಕೊಂಡು ಬರದಂತೆ ಕೆಲವು ಪೋಷಕರಿಗೆ ಮನವಿ ಮಾಡಿದರು. ಬಿಐಇಟಿ ರಸ್ತೆಯಲ್ಲಿ ಬರುತ್ತಿದ್ದ ನಗರ ಸಾರಿಗೆ ಬಸ್ ಹತ್ತಿದ ಜಿಲ್ಲಾಧಿಕಾರಿ, ‘ಬಸ್‌ನಲ್ಲಿ ಮಾಸ್ಕ್ ಹಾಕದೇ ಇದ್ದವರಿಗೆ ಮಾಸ್ಕ್ ನೀಡಿ, ನಗರದಲ್ಲಿ ಪ್ರಕರಣ ಹೆಚ್ಚಾಗಿದೆ ಅವಶ್ಯಕತೆ ಇದ್ದರೆ ಹೊರಗೆ ಬನ್ನಿ’ ಎಂದರು,
ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಮರಳುಸಿದ್ದಪ್ಪ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಕೆ ಟಿ ಗೋಪಾಲಗೌಡ, ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್, ರಾಘವೇಂದ್ರ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.