ಹರಪನಹಳ್ಳಿ: ಆರ್ಟಿಐ ಕಾರ್ಯಕರ್ತ ಶ್ರೀಧರ್ ಅವರ ಹತ್ಯೆ ನಡೆದ 9 ದಿನಗಳು ಕಳೆದರೂ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಪುತ್ರ ಪಿ.ಟಿ. ಭರತ್ ಅವರ ವಿಚಾರಣೆ ಮಾಡದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.
ಹಣದ ಆಮಿಷಕ್ಕೆ ಬಲಿಯಾಗಿ ಶ್ರೀಧರ್ ಅವರ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿಯನ್ನು ಬಂಧಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು. ಈ ಸಂಬಂಧ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳೀಯ ಶಾಸಕರಾಗಿರುವ ಜಿ. ಕರುಣಾಕರ ರೆಡ್ಡಿ ಅವರು ಸೌಜನ್ಯಕ್ಕೂ ಶ್ರೀಧರ್ ಅವರ ಮನೆಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳುವ ಗೋಜಿಗೆ ಹೋಗಿಲ್ಲ. ಈ ಪ್ರಕರಣಗಳಲ್ಲಿ ನ್ಯಾಯದ ಪರ ನಿಲ್ಲಬೇಕು ಎನ್ನುವ ಕನಿಷ್ಠ ಪ್ರಜ್ಞೆ ಅವರಿಗಿದ್ದರೆ ತಕ್ಷಣವೇ ಅವರ ಮನೆಗೆ ತೆರಳಿ ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಬೇಕು. ಶಾಸಕರು ಅವರ ಮನೆಗೆ ಹೋಗದಿದ್ದರೆ, ಶ್ರೀಧರ್ ಹತ್ಯೆಯನ್ನು ಸ್ವಾಗತಿಸಿದಂತೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತರು ತಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ಏಕಾಂಗಿ ಹೋರಾಟ ನಿಲ್ಲಿಸಬೇಕು. ತಮಗೆ ಇಷ್ಟವಾದ ಸಂಘಟನೆಯ ಜೊತೆಗೆ ಸೇರಿ ಹೋರಾಟ ಮಾಡ
ಬೇಕು ಅಥವಾ ಸ್ವಂತ ಸಂಘವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಫ.ಯ. ಗಣೇಶ್, ವಿಜಯನಗರ ಜಿಲ್ಲಾಧ್ಯಕ್ಷ ದೊಡ್ಮನಿ ಚಂದ್ರಶೇಖರ, ಅರವಿಂದ, ಕೆ.ಬಿ. ನಾಯ್ಕ, ಸೋಮ ಸುಂದರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.