ADVERTISEMENT

ದೇವರಹಳ್ಳಿ: ಲಕ್ಷ್ಮಿ ರಂಗನಾಥಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 5:11 IST
Last Updated 25 ಏಪ್ರಿಲ್ 2024, 5:11 IST
ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಬುಧವಾರ ಲಕ್ಷ್ಮಿ ರಂಗನಾಥಸ್ವಾಮಿ ರಥೋತ್ಸವ ಸಡಗರದಿಂದ ನಡೆಯಿತು
ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಬುಧವಾರ ಲಕ್ಷ್ಮಿ ರಂಗನಾಥಸ್ವಾಮಿ ರಥೋತ್ಸವ ಸಡಗರದಿಂದ ನಡೆಯಿತು   

ದೇವರಹಳ್ಳಿ (ಚನ್ನಗಿರಿ): ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಆರಾಧ್ಯದೈವ ಲಕ್ಷ್ಮಿ ರಂಗನಾಥಸ್ವಾಮಿ ರಥೋತ್ಸವ ಬುಧವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ಬೆಳಿಗ್ಗೆ 6ಕ್ಕೆ ರಥೋತ್ಸವ ನಡೆಯಿತು. ನಸುಕಿನಲ್ಲಿಯೇ ನಾಡಿನ ನಾನಾ ಜಿಲ್ಲೆಗಳಲ್ಲಿರುವ ಭಕ್ತರು ವಾಹನಗಳು ಹಾಗೂ ಎತ್ತಿನಗಾಡಿಗಳಲ್ಲಿ ರಥೋತ್ಸವಕ್ಕೆ ಬಂದರು. ನೆಲ ಮಟ್ಟದಿಂದ 180 ಅಡಿ ಎತ್ತರದ ಬೆಟ್ಟದ ಮೇಲಿರುವ ದೇವಸ್ಥಾನದಿಂದ ಕೆಳಗಡೆಗೆ ರಥವನ್ನು ಎಳೆದುಕೊಂಡು ಬರಲಾಗುತ್ತದೆ. ಹಾಗೆಯೇ ಕೆಳಗಡೆ ಬಂದ ರಥವನ್ನು ಮತ್ತೆ ಮೇಲಕ್ಕೆ ಎಳೆದುಕೊಂಡು ಹೋಗುವ ದೃಶ್ಯ ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ. ಈ ದೃಶ್ಯವನ್ನು ನೋಡಲು 15 ಸಾವಿರಕ್ಕಿಂತ ಹೆಚ್ಚು ಭಕ್ತರು ಸೇರಿದ್ದರು.

ರಥೋತ್ಸವ ಮುಕ್ತಾಯಗೊಂಡ ನಂತರ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ತಂದ ಪಾನಕವನ್ನು ನೆರೆದಿದ್ದ ಭಕ್ತರಿಗೆ ಹಂಚಲಾಯಿತು.

ADVERTISEMENT

ಉಡುಗಿರಿ ರಂಗನಾಥಸ್ವಾಮಿ ಹೆಸರು: ಪೌರಾಣಿಕ ಕಥೆಯ ಪ್ರಕಾರ ಉಲ್ಮುಖನೆಂಬ ರಾಕ್ಷಸನು ಇಲ್ಲಿ ವಾಸವಾಗಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಕಾಟ ಕೊಡುತ್ತಿದ್ದ. ಆಗ ಲಕ್ಷ್ಮಿ ರಂಗನಾಥಸ್ವಾಮಿ ‘ಉಡ’ ದ ರೂಪದಲ್ಲಿ ಅವತರಿಸಿ ಈ ರಾಕ್ಷಸನನ್ನು ಸಂಹರಿಸಿದ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿನ ಲಕ್ಷ್ಮಿ ರಂಗನಾಥಸ್ವಾಮಿಗೆ ‘ಉಡುಗಿರಿ ರಂಗನಾಥಸ್ವಾಮಿ’ ಎಂದೂ ಕರೆಯಲಾಗುತ್ತದೆ. ಈ ಗ್ರಾಮ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಜನರು ‘ಉಡ’ ವನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ. ಉಡದ ದೇವಸ್ಥಾನವನ್ನೂ ಇಲ್ಲಿ ನಿರ್ಮಿಸಲಾಗಿದೆ.

ಚನ್ನಗಿರಿ ತಾಲ್ಲೂಕು ದೇವರಹಳ್ಳಿ ರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ ದೇವರ ದರ್ಶನ ಪಡೆಯಲು ಬುಧವಾರ ಬೆಟ್ಟವನ್ನು ಹತ್ತುತ್ತಿರುವ ಭಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.