ADVERTISEMENT

ಸಹಕಾರ ಕ್ಷೇತ್ರ ಬೆಳೆದರೆ ದೇಶದ ಅಭಿವೃದ್ಧಿ- ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 4:57 IST
Last Updated 31 ಡಿಸೆಂಬರ್ 2021, 4:57 IST
ದಾವಣಗೆರೆಯ ವಿನೋಬನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ದಾವಣಗೆರೆ–ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಉದ್ಘಾಟಿಸಿದರು
ದಾವಣಗೆರೆಯ ವಿನೋಬನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ದಾವಣಗೆರೆ–ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಉದ್ಘಾಟಿಸಿದರು   

ದಾವಣಗೆರೆ: ತಂತ್ರಜ್ಞಾನದ ಜೊತೆಗೆ ಸಹಕಾರ ಕ್ಷೇತ್ರವನ್ನು ಬೆಳೆಸಿದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದರು.

ವಿನೋಬಾ ನಗರದ ಕಲಾಪ್ರಕಾಶ ವೃಂದ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಕ್ಷೇತ್ರಾಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ವಿಶೇಷ ಕಾರ್ಯದಕ್ಷತೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಾಂಶ ಮತ್ತು ಸಹಕಾರ ಕ್ಷೇತ್ರ ಒಟ್ಟೊಟ್ಟಿಗೆ ಬೆಳೆಯಬೇಕು. ಇದರಿಂದ ಗ್ರಾಹಕರಿಗೆ, ರೈತರಿಗೆ ಸದಸ್ಯರಿಗೆ ಠೇವಣಿದಾರರಿಗೆ ಅತೀ ಶೀಘ್ರದಲ್ಲಿಯೇ ಸ್ಪಂದಿಸಿ ಅವರ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ADVERTISEMENT

ಡಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಶೇಖರಪ್ಪ, ‘ಈ ಹಿಂದೆ ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ಮತ್ತು ಸಾಲ ಮರುಪಾವತಿ ತುಂಬಾ ಕಷ್ಟದ ವಿಷಯವಾಗಿತ್ತು. ಆದರೆ ಈಗ ಸಹಕಾರ ಸಂಘಗಳ ಮೂಲಕ ಸಾಲ ವಿತರಣೆ ಮತ್ತು ಸಾಲ ಮರುಪಾವತಿ ತುಂಬಾ ಸುಲಭವಾಗಿರುತ್ತದೆ. ಸಹಕಾರ ಕ್ಷೇತ್ರದ ಅಭಿವೃದ್ಧಿಯಿಂದ ಮಾತ್ರ ರೈತರ ಆರ್ಥಿಕ ಪ್ರಗತಿ ಸಾಧ್ಯ’ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಜೆ.ಎಸ್. ವೇಣುಗೋಪಾಲ ರೆಡ್ಡಿ, ‘ರಾಜ್ಯ ಸರ್ಕಾರವು ಫ್ರೂಟ್ಸ್ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ಡಿಸಿಸಿ ಬ್ಯಾಂಕುಗಳು ಮತ್ತು ಫ್ಯಾಕ್ಸ್‌ ರೈತ ಸದಸ್ಯರ ಎಫ್‍ಐಡಿ ಸಂಖ್ಯೆ, ಭೂದಾಖಲೆಗಳು ಮತ್ತು ಸಾಲದ ವಿವರಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಮುಂದಿನ ಹಂತದಲ್ಲಿ ಅಲ್ಪಾವಧಿ ಬೆಳೆ ಸಾಲದ ದಾಖಲಾತಿಗಳು ತಾಲ್ಲೂಕು ಕಚೇರಿಗೆ ಹಾಗೂ ಮಧ್ಯಮಾವಧಿ ಕೃಷಿ ಸಾಲದ ದಾಖಲಾತಿಗಳು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಧಾರ ಮಾಡಲಾಗುತ್ತದೆ ಎಂದುತಿಳಿಸಿದರು.

ಡಿಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾದ ಬಿ.ವಿ. ಚಂದ್ರಶೇಖರ್, ಎಚ್.ಕೆ. ಫಾಲಾಕ್ಪಪ್ಪ, ಎಚ್. ದಿವಾಕರ, ಟಿ.ಜಿ. ಜೀವನ್‍ಪ್ರಕಾಶ್, ಸಹಕಾರ ಒಕ್ಕೂಟದ ನಿರ್ದೇಶಕ ಎಸ್.ಬಿ. ಶಿವಕುಮಾರ್, ಡಿಡಿಸಿಸಿ ಬ್ಯಾಂಕಿನ ಪ್ರಭಾರ ಸಿಇಒ ತಾವರ್ಯಾ ನಾಯ್ಕ, ಜಿಲ್ಲಾ ಸಹಕಾರ ಒಕ್ಕೂಟದ ಪ್ರಭಾರ ಸಿಇಒ ಕೆ.ಎಚ್. ಸಂತೋಷ್‍ಕುಮಾರ್, ವ್ಯವಸ್ಥಾಪಕ ಕೆ.ಎಂ. ಜಗದೀಶ್. ವಿ. ರಂಗನಾಥ್, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಸುಶ್ರುತ್‌ ಶಾಸ್ತ್ರಿ, ವಿವಿಧ ಸಹಕಾರ ಬ್ಯಾಂಕಿನ ಅಧಿಕಾರಿಗಳು, ಕ್ಷೇತ್ರಾಧಿಕಾರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.