
ಚನ್ನಗಿರಿ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ‘ನಮ್ಮೂರು ನಮ್ಮ ಕೆರೆ’ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕ ಬಸವರಾಜು ಶಿವಗಂಗಾ ಉದ್ಘಾಟಿಸಿದರು
ಶೆಟ್ಟಿಹಳ್ಳಿ (ಚನ್ನಗಿರಿ): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘವು ಯಾವುದೇ ಫಲಾಪೇಕ್ಷೆ ಇಲ್ಲದೇ ಸಾಮಾಜಿಕ ಕಳಕಳಿಯಿಂದ ರೈತರ ಬದುಕು ಹಸನು ಮಾಡುವ ಸಲುವಾಗಿ ಕೆರೆಗಳ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಸಾಸಕ ಬಸವರಾಜು ಶಿವಗಂಗಾ ತಿಳಿಸಿದರು.
ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂತೇಬೆನ್ನೂರು ವಲಯ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಮ್ಮೂರು ನಮ್ಮ ಕೆರೆ’ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ವಿಧವೆಯರಿಗೆ ಮಾಸಾಶನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಂಗವಿಕಲರಿಗೆ ಸಾಧನ ಸಾಮಗ್ರಿಗಳ ವಿತರಣೆ, ಕೆರೆಗಳ ಅಭಿವೃದ್ಧಿಯಂತಹ ನೂರಾರು ಕಾರ್ಯಗಳನ್ನು ಮಾಡುತ್ತಾ ಇಡೀ ರಾಜ್ಯದಲ್ಲಿಯೇ ಹೆಸರಾಗಿದೆ’ ಎಂದರು.
ಸಂಘವು ಈಗಾಗಲೇ ರಾಜ್ಯದಲ್ಲಿ 911 ಕೆರೆಗಳನ್ನು ಅಭಿವೃದ್ಧಿಪಡಿಸಿದೆ. ಈ ಗ್ರಾಮದ್ದು 912ನೇ ಕೆರೆಯಾಗಿದೆ. 200 ವರ್ಷಗಳ ಇತಿಹಾಸವನ್ನು ಹೊಂದಿರುವ ಇಲ್ಲಿನ ಕೆರೆ 6.26 ಎಕರೆ ವಿಸ್ತೀರ್ಣವಿದ್ದು, ₹11.89 ಲಕ್ಷ ವೆಚ್ಚದಲ್ಲಿ ಹೂಳು ತೆಗೆಯಿಸಿ ಅಭಿವೃದ್ಧಿಗೊಳಿಸಿದೆ. ಕೆರೆಯ ಹೂಳನ್ನು ರೈತರು ತಮ್ಮ ತೋಟಗಳಿಗೆ ಹಾಕಿಕೊಂಡಿದ್ದಾರೆ. ಗ್ರಾಮದ 350 ಕುಟುಂಬಗಳು ಇದರಿಂದ ಪ್ರಯೋಜನ ಪಡೆದುಕೊಂಡಿವೆ’ ಎಂದು ನಾಮಫಲಕ ಅನಾವರಣ ಮಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಬಿ. ಗೀತಾ, ಕಮಲಾಕ್ಷ, ತಹಶೀಲ್ದಾರ್ ಎನ್.ಜೆ. ನಾಗರಾಜ್, ಸಂತೇಬೆನ್ನೂರು ವಲಯದ ಯೋಜನಾಧಿಕಾರಿ ಕೆ. ಸಂತೋಷ್, ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಈಶ್ವರ್, ಅಧ್ಯಕ್ಷ ರಾಜಪ್ಪ, ಹರೀಶ್ ನಾಯ್ಕ, ಯೋಗರಾಜ್, ಬಲ್ಲೂರು ರವಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.