ದಾವಣಗೆರೆ: ಬೈಕಲ್ಲಿ ಎರಡು–ಮೂರು ಮಂದಿ ಕುಳಿತುಕೊಂಡು ಹೋದರೆ ಪ್ರಶ್ನಿಸಲ್ಲ. ವಿಮಾನದಲ್ಲಿ ಸೀಟುಗಳನ್ನು ಖಾಲಿ ಬಿಡಲ್ಲ. ಅವರನ್ನೆಲ್ಲ ಬಿಟ್ಟು ಬಸ್ ಮೇಲೆ ಕಣ್ಣು ಯಾಕೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಎಸ್. ಸವದಿ ಪ್ರಶ್ನಿಸಿದರು.
ಬಿಎಂಟಿಸಿ ಬಸ್ನಲ್ಲಿ ಅಂತರ ಕಾಪಾಡಿಕೊಳ್ಳದೇ ಇರುವ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಲಾಕ್ಡೌನ್ ಮಾಡಿದ್ದರಿಂದ ಈಗಾಗಲೇ ಸಾರಿಗೆ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಅಂದರೆ ₹ 1800 ಕೋಟಿ ನಷ್ಟ ಅನುಭವಿಸಿವೆ. ಬಸ್ಸಿನಲ್ಲಿ ಅಂತರ ಕಾಪಾಡಿಕೊಂಡರೆ ಶೇ 70ರಷ್ಟು ನಷ್ಟವಾಗುತ್ತದೆ. ಹಾಗಾಗಿ ಸೀಟು ಖಾಲಿ ಬಿಡುವುದಿಲ್ಲ ಎಂದು ಸಮರ್ಥಿಸಿಕೊಂಡರು.
ರಾಜ್ಯದ ಒಳಗೆ ಇತರ ಜಿಲ್ಲೆಗಳಿಗೆ ಬೇಡಿಕೆಗೆ ಅನುಗುಣವಾಗಿ ರಾತ್ರಿ ಬಸ್ ಬಿಡಲಾಗುವುದು. ಅಂತರ ರಾಜ್ಯಗಳಿಗೂ ಬಸ್ ಬಿಡಬೇಕು ಎಂಬ ಪ್ರಸ್ತಾವ ಇದೆಯಾದರೂ ಮಹಾರಾಷ್ಟ್ರ, ಆಂಧ್ರಪ್ರದೇಶ ಸಹಿತ ಸಮೀಪದ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಿರುವುದರಿಂದ ಬೇರೆ ರಾಜ್ಯಗಳಿಗೆ ಬಸ್ ಬಿಡುವ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.