ದಾವಣಗೆರೆ: ಪ್ರತಿಯೊಬ್ಬರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಅಂಗವಿಕಲರು ಒಂದು ವೇಳೆ ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ಮಹಾನಗರ ಪಾಲಿಕೆಗೆ ಮಾಹಿತಿ ಕೊಡಿ. ನಿಮ್ಮ ಮನೆ ಬಾಗಿಲಿಗೆ ಬಂದು ಲಸಿಕೆ ಹಾಕಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಇಲ್ಲಿನ ರೋಟರಿ ಬಾಲಭವನದಲ್ಲಿ ಮಂಗಳವಾರ ಬೆಂಗಳೂರಿನ ಸಮರ್ಥನಂ ಸಂಸ್ಥೆ, ಕರ್ನಾಟಕ ರಾಜ್ಯ ಅಂಗವಿಕಲರ ಆರ್ಪಿಡಿ ಟಾಸ್ಕ್ಫೋರ್ಸ್ ಸಂಘ-ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ 250 ಜನ ವಿಕಲಚೇತನರಿಗೆ ಫುಡ್ಕಿಟ್ ವಿತರಿಸಿ ಮಾತನಾಡಿದರು.
ಕೋವಿಡ್ ಲಸಿಕೆ ವಿಚಾರವಾಗಿ ತಾತ್ಸರ ಮನೋಭಾವನೆ ತಾಳಬೇಡಿ. ಲಸಿಕೆ ಬಂದಾಗ ಅನೇಕ ಜನರು ಅದನ್ನು ವಿರೋಧಿಸಿದ್ದರು. ಈಗ ಎಲ್ಲರೂ ಹಾಕಿಸಿಕೊಳ್ಳುತ್ತಿದ್ದಾರೆ. ಕೆಲವರು ಇನ್ನೂ ಲಸಿಕೆಗೆ ಪಡೆಯಲು ಮುಂದಾಗಿಲ್ಲ, ಅಂಥ ಜನರು ಲಸಿಕಾ ಕೇಂದ್ರಕ್ಕೆ ಬಂದು, ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಅಂಗವಿಕಲ ಮತ್ತು ಹಿರಿಯ ನಾಗರಿಕರ ಇಲಾಖೆಯ ಕಲ್ಯಾಣಾಧಿಕಾರಿ ಕೆ.ಕೆ.ಪ್ರಕಾಶ ಮಾತನಾಡಿ, ವಿಕಲಚೇತನರ ಬಳಿ ಅಂಗವಿಕಲರ ಪ್ರಮಾಣಪತ್ರವಿದ್ದರೂ ಯುಡಿಐಡಿ ಕಾರ್ಡ್ ಇಲ್ಲದಿದ್ದರೆ, ಸರ್ಕಾರ ನಿಮ್ಮನ್ನು ಅಂಗವಿಕಲರು ಎಂದು ಪರಿಗಣಿಸುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಆರ್ಪಿಡಿ ಟಾಸ್ಕ್ಫೋರ್ಸ್ ಸಂಘ-ಸಂಸ್ಥೆಗಳ ಒಕ್ಕೂಟದ ಕೆ.ಎಂ. ನಟರಾಜ್, ರಾಜ್ಯ ಉಪಾಧ್ಯಕ್ಷೆ ಎಂ. ವಿಜಯಲಕ್ಷ್ಮಿ, ಸಮರ್ಥನಂ ಸಂಸ್ಥೆಯ ದೇವರಾಜ್, ಗೋಪಾಲಪ್ಪ, ಡಿ. ರಂಗನಾಥ ರಾವ್ ಗಾಯಕ್ವಾಡ್ ಅವರೂ ಇದ್ದರು. ಸಹನಾ ಪ್ರಾರ್ಥಿಸಿದರು. ರಾಘವೇಂದ್ರ ಎಸ್.ಆರ್. ಸ್ವಾಗತಿಸಿದರು. ಮಂಜುಳಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.