ದಾವಣಗೆರೆ: ಜಿಲ್ಲಾಡಳಿತದ ನೇತೃತ್ವದಲ್ಲಿ ಶುಕ್ರವಾರ ನಡೆದ ನಾಗರಿಕರಿಗೆ ಕೋಳಿ ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
ಎಸ್ಪಿಎಸ್ ನಗರ ಮತ್ತು ಜಾಲಿನಗರ, ಬೂದಾಳ್ ರಸ್ತೆಗಳಲ್ಲಿ ಸಾಂಕೇತಿಕವಾಗಿ ಕೋಳಿ ಮೊಟ್ಟೆಗಳನ್ನು ವಿತರಿಸಲಾಯಿತು.
ಕೊರೊನಾ ವೈರಸ್ ಭೀತಿಯಿಂದ ಜನರಿಗೆ ಪೌಷ್ಟಿಕಾಂಶದ ಕೊರತೆ ಆಗಬಾರದು ಎಂಬ ಸದುದ್ದೇಶದಿಂದ ಕೋಳಿ ಮೊಟ್ಟೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಜಿಲ್ಲಾಡಳಿತದ ನೇತೃತ್ವದಲ್ಲಿ ಮಹಾನಗರ ಪಾಲಿಕೆ, ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯರಾದ ಸುಧಾ ಇಟ್ಟಿಗುಡಿ, ವಿನಾಯಕ ಪೈಲ್ವಾನ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಎನ್. ಚಂದ್ರಪ್ಪ ಇದ್ದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ:ಮೊಟ್ಟೆ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯದೆ ಜನರು ಮುಗಿಬಿದ್ದರು. ಬಳಿಕ ಸಾಂಕೇತಿಕವಾಗಿ ಮೊಟ್ಟೆ ವಿತರಿಸಿ, ಬೂದಾಳ್ ರಸ್ತೆಯ ಮನೆ, ಮನೆಗೆ ಹೋಗಿ ಮೊಟ್ಟೆ ಹಂಚಲಾಯಿತು.
ಹೋಟೆಲ್ ಉದ್ದಿಮೆದಾರರ ಸಂಘದಿಂದ ಆಹಾರದ ಕಿಟ್ ವಿತರಣೆ:
ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದಿಂದ ಇಲ್ಲಿನ ಪಿ.ಬಿ. ರಸ್ತೆಯ ಅಪೂರ್ವ ಹೋಟೆಲ್ ಬಳಿ ಆಹಾರದ ಕಿಟ್ ವಿತರಿಸಲಾಯಿತು. ಅಂತರ ಕಾಯ್ದುಕೊಳ್ಳದೆ ಜನರು ಸರತಿಯಲ್ಲಿ ನಿಂತಿದ್ದರು.
ಆಟೊದಲ್ಲಿ ಕಿಟ್ ತರುತ್ತಿದ್ದಂತೆ ಜನರು ಇದನ್ನು ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಬಳಿಕ ಜನರನ್ನು ಚದುರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.