ದಾವಣಗೆರೆ: ವೈದ್ಯಕೀಯ ಹುದ್ದೆ ಗೌರವಾನ್ವಿತ ಸೇವೆಯಾಗಿದೆ. ದುಡ್ಡಿನ ಹಿಂದೆ ಹೋಗದೇ ದೇವರ ಸೇವೆಯೆಂದು ಜನಸೇವೆ ಮಾಡಬೇಕು. ನಿಮ್ಮ ಊರಿಗೆ ನಿಮ್ಮದೇ ಆದ ಕೊಡುಗೆ ನೀಡಲು ಮನಸ್ಸು ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಎಸ್. ಪ್ರಭುದೇವ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಾದರ ನೌಕರರ ಬಳಗದ ಆಶ್ರಯದಲ್ಲಿ ದಾನಿಗಳು ಮತ್ತು ದಾನ ಪಡೆದ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಿಮಗೆ ಸಹಾಯ ಮಾಡಿದವರನ್ನು ಎಂದಿಗೂ ಮರೆಯದೇ ಜಾಪಕದಲ್ಲಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮಂತೆ ಇತರರಿಗೂ ಆರ್ಥಿಕ ಸಹಾಯ ಮಾಡಬೇಕು. ಅವರ ಭವಿಷ್ಯ ಉಜ್ವಲಕ್ಕೆ ಸಾಕ್ಷಿಯಾಗಬೇಕು’ ಎಂದು ಸಲಹೆ ನೀಡಿದರು.
ಸಾದರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕ ಕೆ. ಕೆಂಚನಗೌಡ, ‘ನಿಮ್ಮೂರಿನ ಜನರ ಸೇವೆ ಮಾಡಲು ದೊಡ್ಡ ಮನಸ್ಸು ಮಾಡಿ. ಸಮಾಜಕ್ಕೆ, ನಿಮ್ಮೂರಿನ ಜನರಿಗೆ ಸೇವೆ ನೀಡಿದಾಗ ಉಪಯುಕ್ತ ಮತ್ತು ಸಾರ್ಥಕತೆ ಕಾಣಬಹುದು’ ಎಂದರು.
ಆರ್ಥಿಕ ನೆರವು ಪಡೆದು ವೈದ್ಯರಾಗಿರುವ ಎನ್. ಪವನ್, ಜಿ. ಕೀರ್ತಿರಾಜ್, ಕೆ.ಬಿ. ಶ್ರೀನಿವಾಸ್, ಸೌಮ್ಯ ಬಿ. ಹುಲ್ಲತ್ತಿ, ಕಿರಣ್, ಎಸ್.ಎಂ. ರಾಜು, ಜಿ.ಎಸ್. ಗೌರಿ ಹಾಗೂ ದಾನಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಸಾದರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಕೆ. ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಉಪಾಧ್ಯಕ್ಷ ಎ.ಆರ್. ಉಜ್ಜನಪ್ಪ, ನಿರ್ದೇಶಕರಾದ ಜಿ.ಆರ್. ಷಣ್ಮುಖಪ್ಪ, ಮಲ್ಲಿಕಾರ್ಜುನ ಎಸ್. ಗುಡಿಹಿಂದಲ, ಎಸ್.ಎನ್. ಜಗದೀಶ್ವರ್, ಜಿ.ಎಸ್. ಪರಮೇಶ್ವರಪ್ಪ, ಎಂ.ಪಿ. ಆನಂದ, ಶಾರದಮ್ಮ, ಎಚ್.ಯು. ಪ್ರೇಮ, ಬಿ. ದಿಳ್ಯೆಪ್ಪ, ಜಿ. ಕಲ್ಲೇಶ್, ಕೆ. ವಿನಾಯಕ, ಲೆಕ್ಕ ಪರಿಶೋಧಕ ಎನ್.ಡಿ. ಮಂಜುನಾಥ್ ಅವರೂ ಇದ್ದರು. ಎಂ.ಜಿ. ಬಸವನಗೌಡ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.