ದಾವಣಗೆರೆ: ‘ರಾಜ್ಯದಲ್ಲಿ ಆರು ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಸಚಿವ ಸಂಪುಟದ ಖಾತೆಗಳು ಬದಲಾವಣೆ ಖಚಿತ. ನನ್ನ ಖಾತೆಯೂ ಬದಲಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
‘ಇದೇ ಖಾತೆಯಲ್ಲಿ ಮುಂದುವರಿಯಲು ಇಷ್ಟಪಡುತ್ತೇನೆ. ಆದರೆ, ಖಾತೆಗಳು ಬದಲಾಗುತ್ತವೆ. ಯಾರೂ ಗೂಟ ಹೊಡೆದುಕೊಂಡು ಇರಲು ಸಾಧ್ಯವಿಲ್ಲ. ಮುಂದಿನ 6 ತಿಂಗಳಲ್ಲಿ ಮತ್ತೆ ಇದೇ ಖಾತೆಗೆ ಬರುತ್ತೇನೆ’ ಎಂದು ಸಚಿವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಕೇಂದ್ರ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿಯೂ ಯುವಕರಿಗೆ ಆದ್ಯತೆ ಸಿಗಬಹುದು’ ಎಂದು ಹೇಳಿದರು.
ಸಿ.ಎಂ ರೇಸ್ನಲ್ಲಿ ನನ್ನ ಹೆಸರು ತರಬೇಡಿ: ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹಾಲಮತ ಸಮಾಜದವರು ಒತ್ತಾಯಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಮುಖ್ಯಮಂತ್ರಿ ರೇಸ್ನಲ್ಲಿ ನನ್ನ ಹೆಸರು ತರಬೇಡಿ. ಐಶ್ವರ್ಯ ರೈ ಅಂತಹ ಹುಡುಗಿ ಸಿಕ್ಕರೆ ಮದುವೆಯಾಗದೇ ಇರುತ್ತೀಯಾ’ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.
‘ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಏನು ಚರ್ಚೆಯಾಗಿದೆಯೋ ಗೊತ್ತಿಲ್ಲ. ಈ ಬಗ್ಗೆ ಯಡಿಯೂರಪ್ಪ ಹಾಗೂ ಹೈಕಮಾಂಡ್ ಅವರನ್ನೇ ಕೇಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.