ADVERTISEMENT

ಹುಣಸಘಟ್ಟ | ವಾಂತಿ–ಭೇದಿ: ಐವರಿಗೆ ಚಿಕಿತ್ಸೆ ಮುಂದುವರಿಕೆ

ಕಲುಷಿತ ನೀರು ಸೇವನೆ ಶಂಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:28 IST
Last Updated 23 ಆಗಸ್ಟ್ 2024, 15:28 IST
ಸಾಸ್ವೆಹಳ್ಳಿ ಸಮೀಪದ ಹುಣಸಘಟ್ಟದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಕೊಳಚೆ ಕಟ್ಟಿಕೊಂಡಿರುವುದನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ತೋರಿಸಿದರು
ಸಾಸ್ವೆಹಳ್ಳಿ ಸಮೀಪದ ಹುಣಸಘಟ್ಟದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಕೊಳಚೆ ಕಟ್ಟಿಕೊಂಡಿರುವುದನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ತೋರಿಸಿದರು   

ಸಾಸ್ವೆಹಳ್ಳಿ: ಹುಣಸಘಟ್ಟ ಗ್ರಾಮದಲ್ಲಿ ವಾಂತಿ–ಭೇದಿಯಿಂದ ಏಳು ಜನ ಆಸ್ಪತ್ರೆಗೆ ದಾಖಲಾಗಿದ್ದು, ಕಲುಷಿತ ನೀರು ಸೇವನೆ ಇದಕ್ಕೆ ಕಾರಣ ಎನ್ನಲಾಗಿದೆ.

ಗ್ರಾಮದ 7 ಜನರಿಗೆ ವಾಂತಿ–ಭೇದಿ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು, ಉಳಿದ ಐವರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕ್ಯಾಸಿನಕೆರೆ ವೈದ್ಯಾಧಿಕಾರಿ ಚಂದ್ರಪ್ಪ ಜಿ.ಬಿ ಹೇಳಿದರು. 

ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್, ಹೊನ್ನಾಳಿ ಟಿಎಚ್‌ಒ ಡಾ.ಗಿರೀಶ್, ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು. 

ADVERTISEMENT

ನೀರಿನ ಮಾದರಿ ಸಂಗ್ರಹಿಸಿದ್ದು, ವರದಿ ಬರುವವರೆಗೂ ನೀರನ್ನು ಕುಡಿಯಬಾರದು ಎಂದ ತಂಡ ಸೂಚನೆ ನೀಡಿತು. ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು, ಮಲಗುವಾಗ ಸೊಳ್ಳೆ ಪರದೆ ಬಳಸಬೇಕು, ಆರೋಗ್ಯದಲ್ಲಿ ವ್ಯತ್ಯಯವಾದರೆ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಯಿತು. 

‘ಚನ್ನಗಿರಿಯ ಸರ್ಕಾರದ ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳುಹಿಸಲಾಗಿದೆ. ನೀರು ಕುಡಿಯಲು ಯೋಗ್ಯವಾಗಿದೆ ಎಂದು ವರದಿ ಬಂದಿದೆ. ಆದರೆ ಆರೋಗ್ಯ ಇಲಾಖೆಯು ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ನೀಡಿದೆ. ಈ ಬಗ್ಗೆ ಪರಿಶೀಲಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪಂಚಾಯಿತಿ ಹುಣಸಘಟ್ಟ ಪಿಡಿಒ ಮಲ್ಲಿಕಾರ್ಜುನ್ ಹೇಳಿದರು. 

‘ಗ್ರಾಮದಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗುವುದಿಲ್ಲ. ಟ್ಯಾಂಕ್‌ಗಳಲ್ಲಿ ಸ್ವಚ್ಛತೆ ಇಲ್ಲ. ಈ ನೀರು ಕುಡಿದ ಜನರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಇಲಾಖೆಯವರು ಈಚೆಗೆ ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಿಲ್ಲ ಎಂದು ವರದಿ ನೀಡಿದ್ದರು. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ’ ಎಂದು ಗ್ರಾಮಸ್ಥ ಮೊಹಮ್ಮದ್‌ ಜಾಫರ್ ಹೇಳಿದ್ದಾರೆ. 

‘ಚರಂಡಿ ಮಟ್ಟಕ್ಕಿಂತ ಕೆಳಭಾಗದಲ್ಲಿ ಕುಡಿಯುವ ನೀರಿನ ನಳ ಅಳವಡಿಸಲಾಗಿದೆ. ಕೆಲವೆಡೆ ಚರಂಡಿಗಳಲ್ಲಿಯೇ ಕುಡಿಯುವ ನೀರಿನ ಪೈಪ್‌ಲೈನ್ ಹಾದುಹೋಗಿದೆ. ಗ್ರಾಮದ ಕೆಲವು ಬೀದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆ. ಎಲ್ಲೆಂದರಲ್ಲಿ ನೀರು ನಿಂತು ಕೊಳಚೆಯಾಗಿ ಮಾರ್ಪಾಡಾಗುತ್ತದೆ’ ಎಂದು ಗ್ರಾಮಸ್ಥ ಹಾಲೇಶಣ್ಣ ತಿಳಿಸಿದ್ದಾರೆ.

ಸಾಸ್ವೆಹಳ್ಳಿ ಸಮೀಪದ ಹುಣಸಘಟ್ಟ ಗ್ರಾಮದಲ್ಲಿ ಟ್ಯಾಂಕ್‌ನಿಂದ ಮನೆಗಳಿಗೆ ನೀರು ಹರಿಸಿಕೊಳ್ಳಲು ಜನರು ಪೈಪ್‌ ಅಳವಡಿಸಿರುವುದು
ಸಾಸ್ವೆಹಳ್ಳಿ ಸಮೀಪದ ಹುಣಸಘಟ್ಟ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.