ADVERTISEMENT

ಕೊರೊನಾ ಪರೀಕ್ಷೆ ಎಲ್ಲರಿಗೂ ಮಾಡಿಸಲಿ: ಶಾಮನೂರು ಶಿವಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 13:02 IST
Last Updated 14 ಏಪ್ರಿಲ್ 2020, 13:02 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ‘ಒಂದೊಂದು ಪ್ರದೇಶದ ಮನೆಯಲ್ಲಿರುವ ಪ್ರತಿಯೊಬ್ಬರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂಬ ಪ್ರಸ್ತಾವವನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರ ಮುಂದಿಟ್ಟಿದ್ದೇವೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಉದಾಹರಣೆಗೆ ಶಾಸ್ತ್ರಿನಗರ, ಎಚ್‌.ಕೆ.ಆರ್‌ ನಗರದ ಎಲ್ಲಾ ಮನೆಗಳಿಗೆ ವೈದ್ಯರ ತಂಡವನ್ನು ಒಮ್ಮೆ ಕಳುಹಿಸಿದರೆ ಒಂದೇ ದಿನಕ್ಕೆ ಎಲ್ಲರನ್ನೂ ಪರೀಕ್ಷೆ ಮಾಡಿ ಮುಗಿಸಬಹುದಾಗಿದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆಗೆ ಚರ್ಚಿಸುವುದಾಗಿ ಬೈರತಿ ಹೇಳಿದ್ದಾರೆ. ಆರೋಗ್ಯ ಸಚಿವರು ಜಿಲ್ಲೆಗೆ ಬರುತ್ತಿರುವುದರಿಂದ ಈ ಬಗ್ಗೆ ಅವರೊಂದಿಗೂ ಚರ್ಚಿಸುತ್ತೇನೆ’ ಎಂದರು.

‘ದಾವಣಗೆರೆಯ ಎರಡೂ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕೊರೊನಾ ಪರೀಕ್ಷೆ ಮಾಡುವ ಕಿಟ್‌ ಕೊಡುತ್ತಿರುವುದಾಗಿ ಸರ್ಕಾರದ ಕಾರ್ಯದರ್ಶಿ ಹೇಳಿದ್ದಾರಂತೆ. ನಮ್ಮಲ್ಲಿ ವೈದ್ಯರು, ತಾಂತ್ರಿಕ ಸಿಬ್ಬಂದಿ ಇದ್ದಾರೆ. ಎಲ್ಲರನ್ನೂ ಬಳಸಿಕೊಂಡರೆ ಒಂದು ತಿಂಗಳಲ್ಲಿ ಇಡೀ ದಾವಣಗೆರೆಯ ಎಲ್ಲಾ ಜನರನ್ನು ಪರೀಕ್ಷೆ ಮಾಡಬಹುದು’ ಎಂದು ಹೇಳಿದರು.

ADVERTISEMENT

ಬಡವರು ಸಾಯಬೇಕಾ?: ‘ಬಡವರಿಗೆ ಒಂದು ಬಾರಿ ಆಹಾರದ ಕಿಟ್‌ ಕೊಟ್ಟಿ ಸುಮ್ಮನಾಗಿದ್ದಾರೆ. 20 ದಿನಗಳ ಕಾಲ ಲಾಕ್‌ಡೌನ್‌ ಮಾಡಿ ಎಂಟು ದಿನಕ್ಕಾಗುವಷ್ಟೂ ಆಹಾರ ಧಾನ್ಯ ಕೊಡುವುದಿಲ್ಲ. ಕೇಳಿದರೆ ಕೊಟ್ಟು ಬಂದಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಬಡವರು ಹಸಿವಿನಿಂದ ಸಾಯಬೇಕಾ? ಐದು ದಿನಕ್ಕೆ, ಎಂಟು ದಿನಕ್ಕೆ ಮತ್ತೊಮ್ಮೆ ಕಿಟ್‌ ಕೊಡಬೇಕು. ಆದರೆ, ದಾನಿಗಳು ಕೊಟ್ಟಿರುವ ಕಿಟ್‌ಗಳನ್ನೂ ಇವರು ಬೀಗ ಹಾಕಿ ಇಟ್ಟುಕೊಂಡಿದ್ದಾರೆ. ಸರ್ಕಾರದಿಂದ ಏನನ್ನೂ ಕೊಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.