ADVERTISEMENT

ದಾವಣಗೆರೆ: ಪ್ರತಿಕೃತಿಗೆ ಚಪ್ಪಲಿಹಾರ, ರೈತನಿಗೆ ಅಣಕು ನೇಣು

ರಾಜ್ಯ ಬಂದ್‌ಗೆ ಮಧ್ಯಾಹ್ನದ ವರೆಗೆ ಉತ್ತಮ ಸ್ಪಂದನ, ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 15:54 IST
Last Updated 28 ಸೆಪ್ಟೆಂಬರ್ 2020, 15:54 IST
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತರ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ನಡೆಸಿದ ಕರ್ನಾಟಕ ಬಂದ್ ವೇಳೆ ದಾವಣಗೆರೆಯ ಅಶೋಕ ರಸ್ತೆಯಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತರ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ನಡೆಸಿದ ಕರ್ನಾಟಕ ಬಂದ್ ವೇಳೆ ದಾವಣಗೆರೆಯ ಅಶೋಕ ರಸ್ತೆಯಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹಮ್ಮಿಕೊಂಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಧ್ಯಾಹ್ನ ವರೆಗೆ ಉತ್ತಮ ಸ್ಪಂದನ ದೊರೆಯಿತು.

ವಿವಿಧ ಸಂಘಟನೆಗಳು ಜಯದೇವ ಸರ್ಕಲ್‌ನಲ್ಲಿ ಬೆಳಿಗ್ಗೆ ಜಮಾವಣೆಗೊಂಡು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ವಿವಿಧ ರಸ್ತೆಗಳಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ತೆರೆದಿದ್ದ ಅಂಗಡಿಗಳನ್ನು ಬಂದ್‌ ಮಾಡುವಂತೆ ಮನವಿ ಮಾಡಿಕೊಂಡರು. ಬಹುತೇಕ ಅಂಗಡಿಗಳು ಬಂದ್‌ ಆಗಿದ್ದವು.

ರೈತರಿಗೆ ನೇಣು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಕಾರ್ಮಿಕರ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಕಾರ್ಮಿಕರಿಗೆ, ರೈತರಿಗೆ ಮರಣಶಾಸನಗಳಾಗಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು. ರೈತರಿಗೆ ಅಣಕು ನೇಣು ಹಾಕಿ ಮಹಿಳೆಯರು ಬಾಯಿಬಾಯಿ ಬಡಿದುಕೊಂಡು ವಿಶಿಷ್ಠವಾಗಿ ಪ್ರತಿಭಟನೆ ನಡೆಸಿದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ರೈತರೊಬ್ಬರನ್ನು ರಸ್ತೆಗೆ ಅಡ್ಡವಾಗಿ ಮಲಗಿಸಿ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಪ್ರತಿಕೃತಿಗಳಿಗೆ ಚಪ್ಪಲಿಹಾರದ ಸನ್ಮಾನ ಮಾಡಲಾಯಿತು. ತಲೆ ಇಲ್ಲದ ಪ್ರತಿಕೃತಿಯನ್ನು ‘ತಲೆ ಇಲ್ಲದ ಸರ್ಕಾರ’ ಎಂದು ದಹಿಸಲಾಯಿತು.

ಬಂಧನ, ಬಿಡುಗಡೆ: ಜಿಲ್ಲಾ ಪಂಚಾಯಿತಿ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್‌ ಸುಟ್ಟು ಹೆದ್ದಾರಿ ಬಂದ್‌ ಮಾಡಿದ ಆರೋಪದಲ್ಲಿ ಕಿಸಾನ್‌ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಶಿವಗಂಗ ಬಸವರಾಜ್‌ ಮತ್ತು ಸಂಗಡಿಗರನ್ನು ವಿದ್ಯಾನಗರ ಪೊಲೀಸರು ಬಂಧಿಸಿದರು. ಪೊಲೀಸ್‌ ಕ್ರಮಕ್ಕೆ ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಿಡುಗಡೆ ಮಾಡಲಾಯಿತು. ಅಂಬೇಡ್ಕರ್‌ ಸರ್ಕಲ್‌ನಲ್ಲಿ ಟೈರ್‌ ಸುಡಲು ಪ್ರತಿಭಟನಕಾರರು ಮುಂದಾದರೂ ಪೊಲೀಸರು ಬಿಡಲಿಲ್ಲ. ಕೆಟಿಜೆ ನಗರ ಪೊಲೀಸರಿಗೆ ಹೋರಾಟಗಾರರಿಗೂ ವಾಗ್ವಾದ ನಡೆಯಿತು.

ಸರ್ಕಾರಿ ಕಚೇರಿ, ಬ್ಯಾಂಕ್ ಬಹುತೇಕ ಬಂದ್‌: ಬೆಳಿಗ್ಗೆ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆದವು. ಪ್ರತಿಭಟನಕಾರರು ಬರುತ್ತಿದ್ದಂತೆ ಬಂದ್‌ ಮಾಡಿದರು. ಬೈಕ್‌ ರ‍್ಯಾಲಿಯೂ ನಡೆಯಿತು.

ವಾಗ್ವಾದ, ಸನ್ಮಾನ: ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಅಂಗಡಿ ತೆರೆದಿದ್ದ ಚೌಡೇಶ್ವರಿ ನಗರದ ಗುಡ್ಡಪ್ಪ ಅವರು ಅಂಗಡಿ ಬಂದ್‌ ಮಾಡಲು ಒಪ್ಪಲಿಲ್ಲ. ರೈತ ಸಂಘಟನೆಯ ಮುಖಂಡರ ಜತೆಗೆ ವಾಗ್ವಾದ ನಡೆಸಿದರು. ಕೃಷಿಕರಿಗೆ ಮೋದಿ ಒಳ್ಳೆಯದೇ ಮಾಡುತ್ತಿದ್ದಾರೆ ಎಂದು ವಾದಿಸಿದರು. ಇದನ್ನು ತಿಳಿದ ಬಿಜೆಪಿ ಬೆಂಬಲಿತರು ಮಧ್ಯಾಹ್ನ ಬಂದು ಸನ್ಮಾನ ಮಾಡಿದರು.

ಆಟೊಗಳು ಎಗ್ಗಿಲ್ಲದೇ ಓಡಾಟ ಮಾಡುತ್ತಿದ್ದವು. ಮಹಿಳಾ ಕಾಂಗ್ರೆಸ್‌ನ ಮುಖಂಡರು ಆಟೊಗಳನ್ನು ತಡೆದರು. ಬಂದ್‌ ಇದೆ ಎಂದು ಗೊತ್ತಿದ್ದೂ ಯಾಕೆ ಆಟೊ ಓಡಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌, ಜೆಡಿಎಸ್‌ನ ಮುಖಂಡರು ಎತ್ತಿನ ಗಾಡಿ ಏರಿ ಪ್ರತಿಭಟನೆ ನಡೆಸಿದರು. ಬಸ್‌ ಸಂಚಾರ ಇಲ್ಲದೇ ಇರುವುದನ್ನು ಅರಿಯದ ಕೆಲವರು ಬಸ್‌ ನಿಲ್ದಾಣಕ್ಕೆ ಬಂದು ಊರಿಗೆ ಹೋಗಲಾರದೆ ಕುಳಿತಿದ್ದರು. ಪ್ರತಿಭಟನಕಾರರು ರಸ್ತೆಯಲ್ಲಿದ್ದಾರೆ. ಅವರು ತೆರಳಿದ ಬಳಿಕ ಬಸ್‌ಗಳನ್ನು ಬಿಡಬಹುದು ಎಂದು ಕೆಎಸ್‌ಆರ್‌ಟಿಸಿ ಟಿ.ಸಿ. ಪ್ರಯಾಣಿಕರಿಗೆ ಸಮಾಧಾನ ಹೇಳಿದರು.

ಮಧ್ಯಾಹ್ನ 2 ಗಂಟೆಯ ಬಳಿಕ ಪ್ರತಿಭಟನೆಯ ಕಾವು ಕಡಿಮೆಯಾಗತೊಡಗಿತು. ಒಂದೊಂದೇ ಅಂಗಡಿಗಳು ತೆರೆಯತೊಡಗಿದವು.

ಹಲವು ಸಂಘಟನೆಗಳು ಭಾಗಿ

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕೋಡಿಹಳ್ಳಿ ಬಣ, ಹುಚ್ಚವ್ವನಹಳ್ಳಿ ಮಂಜುನಾಥ ಬಣ, ಸಿಪಿಐಎಂ, ಸಿಐಟಿಯು, ಕಾಂಗ್ರೆಸ್‌, ಜೆಡಿಎಸ್‌, ಎಸ್‌ಯುಸಿಐ, ಎಐಡಿಎಸ್‌ಒ, ಅಖಿಲ ಭಾರತ ಕಿಸಾನ್ ಸಭಾ, ಕನ್ನಡಪರ ಸಂಘಟನೆಗಳು, ರಕ್ಷಣಾ ವೇದಿಕೆಗಳು ಒಳಗೊಂಡಂತೆ ಹಲವು ಸಂಘಟನೆಗಳು ಭಾಗಿಯಾಗಿದ್ದವು.

ಸಂಘಟನೆಗಳ ಮುಖಂಡರಾದ ಎಚ್‌.ಕೆ. ರಾಮಚಂದ್ರಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್‌, ಹೊನ್ನೂರು ಮುನಿಯಪ್ಪ, ತೇಜಸ್ವಿ ಪಟೇಲ್‌, ಚನ್ನಬಸಪ್ಪ, ‍ಗೋಶಾಲೆ ಬಸವರಾಜು, ರಾಜು, ಡಿ.ಬಸವರಾಜ್‌, ಎ. ನಾಗರಾಜ್‌, ಕೆ.ಎಸ್, ಬಸವಂತಪ್ಪ, ದೇವರಮನಿ ಶಿವಕುಮಾರ್‌, ಕೆ.ಜಿ. ಶಿವಕುಮಾರ್‌, ರಾಮೇಗೌಡ, ಕೆ.ಜಿ. ಯಲ್ಲಪ್ಪ, ಕೆ.ಎಚ್‌. ಹಾಲೇಶ್‌, ಕೆ.ಎನ್‌. ವೆಂಕಟೇಶ್‌, ಅವಿನಾಶ್‌, ಸುವರ್ಣಮ್ಮ, ಅನಿತಾಬಾಯಿ ಮಾಲತೇಶ್‌, ಶುಭಮಂಗಳ, ಭಾರತಿ, ಸೌಮ್ಯಾ, ನಾಗಜ್ಯೋತಿ, ಆವರಗೆರೆ ವಾಸು, ಎಚ್.ಜಿ ಉಮೇಶ್, ಐರಾಣಿ ಚಂದ್ರು, ಶ್ರೀನಿವಾಸ್, ಮಂಜುನಾಥ್ ಕೈದಾಳೆ, ತಿಪ್ಪೇಶ್, ಮಹಮ್ಮದ್ ರಫೀಕ್ ರಂಗನಾಥ್, ಪರಶುರಾಮಪ್ಪ, ಮುದ್ದೇಗೌಡ ಗಿರೀಶ್‌, ಭದ್ರಪ್ಪ, ಸೋಮಶೇಖರ್‌, ಕರಿಯಪ್ಪ ಇನ್ನೂ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.