
ದಾವಣಗೆರೆ: ಧಾರವಾಡದಿಂದ ಬೆಂಗಳೂರಿನತ್ತ ಹೊರಟಿದ್ದ ‘ವಂದೇ ಭಾರತ್’ ರೈಲಿನ ಚಕ್ರವೊಂದರಲ್ಲಿ ದಾವಣಗೆರೆ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಲೋಕೊ ಪೈಲಟ್ ಸಮಯಪ್ರಜ್ಞೆಯಿಂದಾಗಿ ಸಂಭವಿನೀಯ ಅಪಘಾತವೊಂದು ತಪ್ಪಿದೆ. ಈ ರೈಲು ಸಂಚಾರವನ್ನು ರದ್ದುಪಡಿಸಿದ ರೈಲ್ವೆ ಇಲಾಖೆ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿತು.
ಶುಕ್ರವಾರ ಮಧ್ಯಾಹ್ನ 3.30ಕ್ಕೆ ಹರಿಹರ ಮತ್ತು ದಾವಣಗೆರೆ ನಡುವೆ ರೈಲು ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಕ್ಷಣ ಜಾಗೃತರಾದ ರೈಲ್ವೆ ಸಿಬ್ಬಂದಿ, ಚಲಿಸುತ್ತಿದ್ದ ರೈಲು ನಿಲುಗಡೆ ಮಾಡಿ ಬೆಂಕಿ ಆರಿಸಿದ್ದಾರೆ. ಈ ರೈಲಿನಲ್ಲಿ 502 ಜನ ಪ್ರಯಾಣಿಕರಿದ್ದರು.
‘ವಂದೇ ಭಾರತ್’ ರೈಲಿನ ‘ಸಿ–4’ ಕೋಚ್ನ ಗಾಲಿಯೊಂದರ ‘ಹಾಟ್ ಎಕ್ಸೆಲ್’ನಿಂದ ಬೆಂಕಿ ಕಿಡಿ ಹೊತ್ತಿಕೊಂಡಿದೆ. ತಕ್ಷಣ ಆವರಿಸಿಕೊಂಡ ಹೊಗೆ ಆವರಿಸಿದ ಬಗ್ಗೆ ಎಂಜಿನ್ಗೆ ಸಂದೇಶ ರವಾನೆಯಾಗಿದೆ. ಅಂದಾಜು 100 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲನ್ನು ನಿಲುಗಡೆ ಮಾಡಿ ಬೆಂಕಿಯ ಕಿಡಿಯನ್ನು ನಂದಿಸಲಾಗಿದೆ. ತಾಂತ್ರಿಕ ತೊಂದರೆಯನ್ನು ಸರಿಪಡಿಸಿಕೊಂಡು ದಾವಣಗೆರೆ ನಿಲ್ದಾಣದವರೆಗೆ ರೈಲನ್ನು ತರಲಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ರೈಲನ್ನು ಪರಿಶೀಲಿಸಿದ ತಾಂತ್ರಿಕ ತಂಡ ಸಂಚಾರವನ್ನು ರದ್ದುಪಡಿಸಿದೆ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಜನಶತಾಬ್ದಿ’, ‘ಜೋಧ್ಪುರ ಎಕ್ಸ್ಪ್ರೆಸ್’ ರೈಲುಗಳಲ್ಲಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ. ನಂತರ ಹರಿಹರದಲ್ಲಿರುವ ವರ್ಕ್ಶಾಪ್ಗೆ ರೈಲನ್ನು ಕಳುಹಿಸಲಾಗಿದೆ.
‘ರೈಲಿನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು ನಿಜ. ಇದು ಹೆಚ್ಚು ಗಾಬರಿಪಡುವಂತಹದ್ದಲ್ಲ. ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿ ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ಟಿಕೆಟ್ ದರ ಹಿಂದಿರುಗಿಸಲಾಗುವುದು’ ಎಂದು ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.