ADVERTISEMENT

ಜೈನ ಸಮುದಾಯದ ನಾಲ್ವರ ಸನ್ಯಾಸ ದೀಕ್ಷೆ ಸಮಾರಂಭ ಮಾರ್ಚ್‌ 4ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:02 IST
Last Updated 2 ಮಾರ್ಚ್ 2026, 16:02 IST
<div class="paragraphs"><p>ಭರತ್ ಜೈನ್</p></div>

ಭರತ್ ಜೈನ್

   

ದಾವಣಗೆರೆ: ಜೈನ ಸಮುದಾಯದ ನಾಲ್ವರ ಸನ್ಯಾಸ ದೀಕ್ಷೆ ಸಮಾರಂಭವನ್ನು ನಗರದ ಹೊಳೆಹೊನ್ನೂರು ತೋಟದಲ್ಲಿ ಮಾರ್ಚ್‌ 4ರಂದು ಹಮ್ಮಿಕೊಳ್ಳಲಾಗಿದೆ. ಜೈನ ಗುರುಗಳಾದ ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರಿಂದ ಇಬ್ಬರು ಯುವತಿಯರು ಹಾಗೂ ಉದ್ಯಮಿ ದಂಪತಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.

ನಗರದ ಲಲಿತ್ ಗಾರ್ಮೆಂಟ್ಸ್ ಬಟ್ಟೆ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ಭರತ್ ಜೈನ್ (52), ಇವರ ಪತ್ನಿ ಆರತಿ (50), ಎಂಬಿಎ ಪದವೀಧರೆ ಕ್ರುನಾಲಿ ಜೈನ್ (30) ಹಾಗೂ ಬಿಕಾಂ ಪದವೀಧರೆ ದೀಕ್ಷಿತಾ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಅರುಣಾ ಟಾಕೀಸ್‌ ಮುಂಭಾಗದ ಹೊಳೆಹೊನ್ನೂರು ತೋಟದ ಅವರಣದಲ್ಲಿ ಇವರಿಗೆ ಸೋಮವಾರ ರಾತ್ರಿ ಬಿಳ್ಕೋಡುಗೆ ನೀಡಲಾಯಿತು.

ADVERTISEMENT

ಭರತ್ ಜೈನ್ ಹಾಗೂ ಆರತಿ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಮಗ್ನಶೇಖರ್ ವಿಜಯ್ ಮಹಾರಾಜ್ (28) ಹಾಗೂ ಪೂರ್ಣ ಶೇಖರ್ ವಿಜಯ್ (25) ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪುತ್ರರ ಮಾರ್ಗವನ್ನು ಅನುಸರಿಸಿದ ಭರತ್‌ ಜೈನ್‌ ಹಾಗೂ ಆರತಿ ಅವರೂ ಸನ್ಯಾಸ ದೀಕ್ಷೆ ಪಡೆಯುತ್ತಿದ್ದಾರೆ.

ಅರುಣ್ ಕುಮಾರ್ ಜೈನ್ ಹಾಗೂ ಅನ್ನಪೂರ್ಣ ಬಾಯಿ ಪುತ್ರಿ ದೀಕ್ಷಿತಾ ಮೂಲತಃ ದಾವಣಗೆರೆಯವರು. ಕಮಲೇಶ್ ಜೈನ್ ಹಾಗೂ ಬಬಿತಾ ಜೈನ್ ಪುತ್ರಿ ಕ್ರುನಾಲಿ ಅವರು ಪೂಣೆಯ ಸಿಂಬೋಸಿಸ್ ಕಾಲೇಜಿನಿಂದ ಎಂಬಿಎ ಪದವಿ ಪಡೆದಿದ್ದಾರೆ.

ಮಂಗಳವಾರ ಭವ್ಯ ಮೆರವಣಿಗೆ

ಸನ್ಯಾಸ ದೀಕ್ಷೆ ಪಡೆಯಲಿರುವ ನಾಲ್ವರ ಭವ್ಯ ಮೆರಣಿಗೆಯನ್ನು ಜೈನ ಸಮಾಜದ ವತಿಯಿಂದ ಮಾರ್ಚ್‌ 3ರಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9ಕ್ಕೆ ಚೌಕಿಪೇಟೆಯಲ್ಲಿರುವ ಸುಪಾರ್ಶ್ವನಾಥ್ ಜೈನ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಹಾಸಬಾವಿ ವೃತ್ತ, ಚಾಮರಾಜಪೇಟೆ ವೃತ್ತ, ಮಂಡಿಪೇಟೆ, ವಸಂತ ರಸ್ತೆ, ಪಿ.ಬಿ. ರಸ್ತೆಯ ಮೂಲಕ ಅಭಿನವ ರೇಣುಕ ಮಂದಿರ ತಲುಪಲಿದೆ.

ಮಾರ್ಚ್‌ 4ರಂದು ಬೆಳಿಗ್ಗೆ 6ಕ್ಕೆ ಅಭಯ್ ಶೇಖರ್ ಸುರೀಶ್ವರ್ ಮಹಾರಾಜ್‌ ಅವರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಸುಪಾರ್ಶ್ವನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜ್ಯಕ ಸಂಘದ ಗೌತಮ್‌ ಜೈನ್‌ ತಿಳಿಸಿದ್ದಾರೆ.

ಆರತಿ

ಕ್ರುನಾಲಿ ಜೈನ್

ದೀಕ್ಷಿತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.