ಸಂತೇಬೆನ್ನೂರು: ‘ನೋಟಿನ ಕಟ್ಟಿನಲ್ಲಿ ಹರಿದ ನೋಟುಗಳಿರಬಹುದು ಪರಿಶೀಲಿಸುವೆ’ ಎಂದು ಖಾತೆದಾರನಿಂದ ಹಣದ ಕಟ್ಟು ಪಡೆದ ವ್ಯಕ್ತಿಯೊಬ್ಬ ಹಣ ಎಣಿಸುವ ನಾಟಕ ಮಾಡಿ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ₹ 11,000 ಎಗರಿಸಿ ಪಲಾಯನ ಮಾಡಿದ ಘಟನೆ ಇಲ್ಲಿನ ಕೆನರಾ ಬ್ಯಾಂಕ್ನಲ್ಲಿ ಮಂಗಳವಾರ ನಡೆದಿದೆ.
ಭೀಮನೆರೆ ಬಸವರಾಜ್ ಕೆನರಾ ಬ್ಯಾಂಕ್ ಕ್ಯಾಶ್ ಕೌಂಟರ್ನಲ್ಲಿ ₹ 50,000 ಪಡೆದರು. ₹ 500 ಮೌಲ್ಯದ 100 ನೋಟಿನ ಕಂತೆ ಅದಾಗಿತ್ತು. ಪಕ್ಕದಲ್ಲೇ ಇದ್ದ ಅಪರಿಚಿತ ವ್ಯಕ್ತಿ ನೋಟಿನ ಕಂತೆಯಲ್ಲಿ ಹರಿದ ಹಾಗೂ ನಕಲಿ ನೋಟುಗಳಿರುತ್ತವೆ. ಸ್ವಲ್ಪ ಕೊಡಿ ಪರಿಶೀಲಿಸುತ್ತೇನೆ ಎಂದು ಹಣದ ಕಟ್ಟನ್ನು ಪಡೆದಿದ್ದಾನೆ. ಹಣವನ್ನು ಎಣಿಸಿ ಸರಿ ಇದೆ ಎಂದು ಕಟ್ಟನ್ನು ಹಿಂತಿರುಗಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬಸವರಾಜ್ ಅವರು ನೋಟಿನ ಕಟ್ಟು ಸ್ವಲ್ಪ ಹಗುರಾಗಿದ್ದು ಮನಗಂಡು ತಕ್ಷಣ ಮರು ಎಣಿಕೆ ಮಾಡಿದ್ದಾರೆ. ಆಗ ಕೇವಲ 78 ನೋಟುಗಳಿರುವುದು ಕಂಡು ಬಂದಿದೆ. 22 ನೋಟುಗಳನ್ನು ಅಪರಿಚಿತ ವ್ಯಕ್ತಿ ಎಗರಿಸಿ ಕಣ್ಮರೆ ಆಗಿದ್ದಾನೆ. ತಕ್ಷಣ ಬ್ಯಾಂಕ್ನ ಅಧಿಕಾರಿಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಸಲು ಮನವಿ ಮಾಡಿದರು. ಅಲ್ಲೇ ಇದ್ದ ಗ್ರಾಹಕರು ಘಟನೆಗೆ ಅಚ್ಚರಿ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.