ದಾವಣಗೆರೆ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಆಗಸ್ಟ್ 21 ಹಾಗೂ 22ರಂದು ಗೌರಿ ಗಣೇಶ ಹಬ್ಬಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಹಾಗೂ ಮೊಹರಂ ಹಬ್ಬದಲ್ಲಿ ತಾಬೂತುಗಳ ಪ್ರತಿಷ್ಠಾಪನೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗಣೇಶಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ನೃತ್ಯ ಮಾಡುತ್ತಾ ಬಣ್ಣ ಎರಚುವುದರಿಂದ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ.ಅಲ್ಲದೇ ಕೇಂದ್ರ ಸರ್ಕಾರದ ತೆರವು–3 ಮಾರ್ಗಸೂಚಿ ಆಗಸ್ಟ್ 31ರವರೆಗೆ ಇದ್ದು, ಅದರಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಿಗೆ ಅನುಮತಿ ನೀಡಿಲ್ಲ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗಣೇಶ ಹಾಗೂ ಮೊಹರಂ ಹಬ್ಬ ಸಂಬಂಧ ಯಾವುದೇ ಮೆರವಣಿಗೆ ರ್ಯಾಲಿ, ಜಾಥಾ ಕಾರ್ಯಕ್ರಮಗಳು ಹಾಗೂ ಡಿ.ಜೆ. ಸಿಸ್ಟಂ ಬಳಸುವಂತಿಲ್ಲ ಎಂದು ಆದೇಶ ನೀಡಿದ್ದಾರೆ.
ಭದ್ರತೆಗೆ ಪೊಲೀಸರ ಕೊರತೆ:ಜಿಲ್ಲೆಯಲ್ಲಿ 324 ಕಂಟೈನ್ಮೆಂಟ್ ವಲಯಗಳು ಇದ್ದು, ಬಂದೋಬಸ್ತ್ಗಾಗಿ ಈಗಾಗಲೇ ಗರಿಷ್ಠ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದು, ಹೆಚ್ಚುವರಿಯಾಗಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. 50 ಪೊಲೀಸರಿಗೆ ಕೋವಿಡ್–19 ದೃಢಪಟ್ಟಿರುವುದರಿಂದ ಭದ್ರತೆಗೆ ಪೊಲೀಸರ ಕೊರತೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.