ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಪೌರಕಾರ್ಮಿಕರ ಜೊತೆಗೆ ಗುರುವಾರ ಸಂವಾದ ನಡೆಸಿದರು. ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಉಪಸ್ಥಿತರಿದ್ದರು
ದಾವಣಗೆರೆ: ‘ಎಲ್ಲೆಂದರಲ್ಲಿ ಬಿಸಾಡಿದ ಕಸ ವಿಲೇವಾರಿಗೆ ಮುಂದಾದಾಗ ಮೂತ್ರದ ದುರ್ನಾಥ ಮೂಗಿಗೆ ಬಡಿಯುತ್ತದೆ. ಇಂತಹ ಸ್ಥಳಗಳನ್ನು ಶುಚಿಗೊಳಿಸಿ, ಕಸ ವಿಲೇವಾರಿ ಮಾಡಿದ ಬಳಿಕ ಊಟ ಸೇರುವುದಿಲ್ಲ. ನಾವೂ ಮನುಷ್ಯರು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು..’
ಪೌರಕಾರ್ಮಿಕರಾದ ಹನುಮಕ್ಕ ಹಾಗೂ ಕಾಟಮ್ಮ ಅವರು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬಳಿ ಗುರುವಾರ ಹೀಗೆ ಅಳಲು ತೋಡಿಕೊಂಡರು.
‘ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಇದನ್ನು ಜನರು ಕೂಡ ಅರ್ಥಮಾಡಿಕೊಳ್ಳಬೇಕು. ಕಸ ಸಮರ್ಪಕವಾಗಿ ವಿಲೇವಾರಿ ಮಾಡಲು ಸಹಕಾರ ನೀಡಬೇಕು. ರಾತ್ರಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ನೀಡಬೇಕು’ ಎಂದು ಮನವಿ ಮಾಡಿದರು.
‘₹ 800 ಮಾಸಿಕ ವೇತನದಿಂದ ಕೆಲಸ ಆರಂಭಿಸಿದ್ದೇವೆ. ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ ಕೆಲಸ ಮಾಡಿದ್ದೇವೆ. ಗಣಪತಿ, ದೀಪಾವಳಿ, ದಸರಾ ಹಬ್ಬದಲ್ಲಿ ಹಾಗೂ ದೊಡ್ಡ ಕಾರ್ಯಕ್ರಮ ನಡೆದಾಗ ಸ್ವಚ್ಛತೆ ಕಾಪಾಡಿದ್ದೇವೆ. ಜನರು ಸಹಕಾರ ನೀಡಿದರೆ ನಗರವನ್ನು ಇನ್ನಷ್ಟು ಶುಚಿಯಾಗಿಡಲು ಸಾಧ್ಯ’ ಎಂದು ಪೌರಕಾರ್ಮಿಕರಾದ ಶ್ರೀರಾಮ್ ಮತ್ತು ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುತ್ತಿಗೆ ಆಧಾರಿತ ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ಆರೋಗ್ಯ ವಿಮೆ, ಸುರಕ್ಷತಾ ಸಾಧನಗಳನ್ನು ವಿತರಿಸಬೇಕು. ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಸದರ ಮುಂದಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.