ಹಿರಿಯೂರು: ‘ಸತತ ಪ್ರಯತ್ನದ ಫಲವಾಗಿ ತಾಲ್ಲೂಕಿನ ಗಾಯಿತ್ರಿ ಜಲಾಶಯದ ಅಭಿವೃದ್ಧಿಗೆ ಸರ್ಕಾರ ₹ 12 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಕೋಡಿ ಬಿದ್ದಿರುವ ತಾಲ್ಲೂಕಿನ ಕರಿಯಾಲ ಗ್ರಾಮದ ಸಮೀಪದ ಗಾಯತ್ರಿ ಜಲಾಶಯದಲ್ಲಿ ಮಂಗಳವಾರ ಗಂಗಾಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಕೋವಿಡ್ ಕಾರಣದಿಂದ ಎರಡು ವರ್ಷ ಸರ್ಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವುದು ದೊಡ್ಡ ಸವಾಲಾಗಿತ್ತು. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ದನಿ ಎತ್ತಿ, ನೀರಾವರಿ, ಶಿಕ್ಷಣ, ಮೂಲಭೂತ ಸೌಕರ್ಯಕ್ಕೆ ಹಣ ತರುವಲ್ಲಿ ಯಶಸ್ವಿಯಾಗಿದ್ದೇನೆ. ಕೆಲವರು ಟೀಕೆ ಮಾಡಲೇಬೇಕು ಎಂಬ ದುರುದ್ದೇಶದಿಂದ ಆರೋಪ ಮಾಡುತ್ತಿದ್ದು, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. 2019ರಲ್ಲಿ ವಾಣಿವಿಲಾಸ ಜಲಾಶಯ ಡೆಡ್ ಸ್ಟೋರೇಜ್ ತಲುಪಿತ್ತು. ಅದಕ್ಕೆ ಕಾರಣ ಯಾರು ಎಂಬುದು ಜನತೆಗೆ ಗೊತ್ತಿದೆ. ಜಲಾಶಯಕ್ಕೆ 2008 ರಲ್ಲಿ 5 ಟಿಎಂಸಿ ಅಡಿ ಮೀಸಲಿಟ್ಟ ನೀರನ್ನು 2 ಟಿಎಂಸಿ ಅಡಿಗೆ ಇಳಿಸಿದ್ದು ಯಾರ ಅವಧಿಯಲ್ಲಿ ಎಂಬುದು ಗೊತ್ತಿದೆ. ಜಲಾಶಯವನ್ನು ಖಾಲಿ ಮಾಡಿ ಬ್ಯಾರೇಜ್ ಕಟ್ಟಿಸಿದರೆ ಬಂದ ಪ್ರಯೋಜನವೇನು’ ಎಂದು ಪ್ರಶ್ನಿಸಿದರು.
ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಜೆ ಜಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಬಾನಾ ಪರ್ವಿನ್, ಮುಖಂಡರಾದ ಎಂ.ಜಗದೀಶ್, ಟಿ. ತಿಮ್ಮರಾಯಪ್ಪ, ಮಹೇಶ್, ಅಲ್ತಾಫ್, ಜಗದಾಂಬ, ಇಲಿಯಾಸ್, ಕೆಂಚಪ್ಪ, ಶೌಕತ್, ವೀರೇಶ್, ತಿರುಮಲೇಶ್, ಬಸವರಾಜ್, ಮಂಜುಳಾ ಮಹಲಿಂಗಪ್ಪ, ಚಂದ್ರಪ್ಪ, ನಾಗೇಂದ್ರಪ್ಪ, ದೇವರಾಜ್, ಪರಮೇಶ್, ಬಿ. ಕೆ. ಕರಿಯಪ್ಪ, ಸಣ್ಣಪ್ಪ ಅವರೂ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.