ADVERTISEMENT

ದಾವಣಗೆರೆ | ದಾನಿಗಳ ನೆರವು: ಸರ್ಕಾರಿ ಶಾಲೆಗಳ ಅಭಿವೃದ್ಧಿ ಪರ್ವ

ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಕರಿಂದಲೂ ಸಹಾಯಹಸ್ತ

ಅನಿತಾ ಎಚ್.
Published 16 ಡಿಸೆಂಬರ್ 2024, 7:18 IST
Last Updated 16 ಡಿಸೆಂಬರ್ 2024, 7:18 IST
ದಾವಣಗೆರೆ ಉತ್ತರ ಕ್ಷೇತ್ರದ ಕಂದನಕೋವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಣ್ಣ ಬಳಿಸಿರುವುದು
ದಾವಣಗೆರೆ ಉತ್ತರ ಕ್ಷೇತ್ರದ ಕಂದನಕೋವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಣ್ಣ ಬಳಿಸಿರುವುದು   

ದಾವಣಗೆರೆ: ಜಿಲ್ಲೆಯ ಹಲವೆಡೆ ದಾನಿಗಳ ನೆರವಿನಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವತಃ ಶಿಕ್ಷಕರೂ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಹಲವು ಶಾಲೆಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣ ಆಗಿರುವುದರಿಂದ ಪ್ರಸ್ತುತ ಶಿಥಿಲಾವಸ್ಥೆ ತಲುಪಿವೆ. ಮಳೆಗಾಲದಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಕೂರಲಾಗದ ಸ್ಥಿತಿ ಇದೆ. ಬಹುತೇಕ ಶಾಲೆಗಳು ಸುಣ್ಣ–ಬಣ್ಣ ಕಾಣದ ಕಾರಣ ಕಳೆಗುಂದಿದ್ದು, ಕಲಿಕಾ ವಾತಾವರಣವೇ ಇಲ್ಲದಂತಾಗಿದೆ. ಮೂಲ ಸೌರ್ಕರ್ಯಗಳ ಕೊರತೆಯೂ ಗಂಭೀರವಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುವಂತಹ ಸ್ಥಿತಿ ಇದೆ.

ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬಡವರು, ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಈ ಶಾಲೆಗಳೇ ಆಸರೆಯಾಗಿವೆ. ಇದನ್ನು ಮನಗಂಡ ದಾನಿಗಳು ಇಲಾಖೆ ಹಾಗೂ ಶಿಕ್ಷಕರು ‘ನಮ್ಮ ಶಾಲೆ ನಮ್ಮ ಹೆಮ್ಮೆ’, ‘ಶಾಲೆಗಾಗಿ ನಾವು ನೀವು’, ಕಾರ್ಯಕ್ರಮಗಳ ಅಡಿ ಮಾಡಿದ ಮನವಿಗೆ ಶಾಲೆಗಳ ಅಭಿವೃದ್ಧಿಗೆ ಧಾವಿಸಿದ್ದಾರೆ.

ADVERTISEMENT

ದಾವಣಗೆರೆ ತಾಲ್ಲೂಕಿನ ಕಂದನಕೋವಿ ಸರ್ಕಾರಿ ಪ್ರೌಢಶಾಲೆ ಕಟ್ಟಡ 15 ವರ್ಷಗಳಿಂದ ಸುಣ್ಣ–ಬಣ್ಣ ಕಾಣದೆ ಸಂಪೂರ್ಣ ಕಳೆಗುಂದಿತ್ತು. ಮುಖ್ಯಶಿಕ್ಷಕಿ ಸವಿತಾ ಎಸ್‌.ಟಿ ತೋರಿದ ಕಾಳಜಿಯಿಂದಾಗಿ ಶಾಲೆಗೆ ಮತ್ತ ಕಳೆಬಂದಿದೆ. ಇವರು ಬಾಪೂಜಿ ಶಾಲೆಯ ಅಲಮ್ನಿ ಟ್ರಸ್ಟ್‌ನಲ್ಲಿರುವ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಿವಣ್ಣ ಮತ್ತು ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌ ಅವರಿಗೆ ಶಾಲೆಯ ದುಃಸ್ಥಿತಿ ಬಗ್ಗೆ ವಿವರಿಸಿದ್ದರು. ಅವರ ಮನವಿಗೆ ಸ್ಪಂದಿಸಿ, ಶಾಲೆಗೆ ಭೇಟಿ ನೀಡಿದ್ದ ಟ್ರಸ್ಟ್‌ ಸದಸ್ಯರು ಕಟ್ಟಡ ಸ್ವಚ್ಛಗೊಳಿಸಿ, ಬಣ್ಣ ಬಳಿಸಿದ್ದಾರೆ. ಗೋಡೆಗಳ ಮೇಲೆ ರಾಷ್ಟ್ರನಾಯಕರ ಚಿತ್ರಗಳು ಹಾಗೂ ಗೋಡೆಬರಹಗಳು ಗಮನ ಸೆಳೆಯುತ್ತಿವೆ.

ಶಾಲೆಯ ಆರು ಜನ ಶಿಕ್ಷಕರು ₹ 60,000 ಠೇವಣಿ ಇರಿಸಿ, ಅದರ ಬಡ್ಡಿ ಹಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಶಾಲೆಯಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಗ್ರಾಮ ಪಂಚಾಯಿತಿ ಸಹಕಾರದಿಂದ ಸಮಸ್ಯೆ ಪರಿಹಾರವಾಗಿದೆ. 11 ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಟ್ಟಿದ್ದಾರೆ. ಹೈಟೆಕ್‌ ಶೌಚಾಲಯ ನಿರ್ಮಾಣ ಕಾಮಗಾರಿ ಸಾಗಿದೆ ಎನ್ನುತ್ತಾರೆ ಮುಖ್ಯಶಿಕ್ಷಕಿ.

ಹೊಸ ಬುಳ್ಳಾಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸುಸ್ಥಿತಿಯಲ್ಲಿದೆ. ಆದರೆ, ವಿದ್ಯಾರ್ಥಿಗಳು ಕೂರಲು ಬೆಂಚ್‌ ಇರಲಿಲ್ಲ. ಶಿಕ್ಷಕ ಬಿ.ಟಿ. ಅರುಣ ಮಾಡಿದ ಮನವಿಗೆ ಸ್ಪಂದಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 7 ಡೆಸ್ಕ್‌, ರೋಟರಿ ಕ್ಲಬ್‌ 12 ಡೆಸ್ಕ್‌ ನೀಡಿದೆ. ತಮಿಳುನಾಡಿನ ಸ್ವಯಂ ಸೇವಾ ಸಂಸ್ಥೆ ‘ಗ್ರಾಮಾಲಯ’ವು ಎಲ್‌ಐಸಿಎಚ್‌ಎಫ್‌ಎಲ್‌ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಟ್ಟಿದ್ದು, ಈ ಶಾಲೆಗೂ ಸೌಲಭ್ಯ ಲಭ್ಯವಾಗಿದೆ.

ಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಪುತ್ರ ಜಯದೇವ ಅವರ ಚಾಮರಾಜನಗರದ ‘ದೀನ ಬಂಧು’ ಸಂಪನ್ಮೂಲ ಕೇಂದ್ರವು ಪ್ರಯೋಗಾಲಯ ಸ್ಥಾಪನೆಗೆ ಅಗತ್ಯ ಸಾಮಗ್ರಿಗಳು ಹಾಗೂ 4 ಟೇಬಲ್‌ ಒದಗಿಸಿದೆ. ಶಿಕ್ಷಕ ಅರುಣ ಅವರು ಸ್ವತಃ ಟಿ.ವಿ. ಹಾಗೂ ಧ್ವನಿವರ್ಧಕದ ವ್ಯವಸ್ಥೆ ಮಾಡಿದ್ದಾರೆ.

ಕುಗ್ರಾಮ ಹೊಸಕೆರೆಯಾಗಳಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದೆ. ಹಳೆಯ ವಿದ್ಯಾರ್ಥಿಗಳು 2021–22ರಲ್ಲಿ ಶಾಲೆಗೆ ರೈಲಿನ ಚಿತ್ರದ ಮಾದರಿಯಲ್ಲಿ ಬಣ್ಣ ಬಳಿಸಿದ್ದರು. ದೇಣಿಗೆ ಸಂಗ್ರಹಿಸಿ ಅದ್ದೂರಿಯಾಗಿ ವಾರ್ಷಿಕೋತ್ಸವ ಆಚರಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಅವರು ಶಾರದಾ ಪ್ರತಿಮೆ ಮಾಡಿಸಿಕೊಟ್ಟಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕೃಷಿ ಪರಿಕರಗಳ ವ್ಯಾಪಾರಿ ಎ.ಬಿ. ಸೋಮಶೇಖರ್‌ ಅವರು ₹ 4 ಲಕ್ಷ ವೆಚ್ಚದಲ್ಲಿ ಎಲ್ಲ ಕೊಠಡಿಗಳಿಗೂ ಫ್ಯಾನ್‌, ಎಲ್‌ಇಡಿ ಟ್ಯೂಬ್‌ ಲೈಟ್‌, ಡೆಸ್ಕ್‌, 6 ಗ್ರೀನ್‌ ಬೋರ್ಡ್‌, 1 ಲ್ಯಾಪ್‌ಟಾಪ್‌, ಯುಪಿಎಸ್‌, ಪ್ರಿಂಟರ್‌, ನಲಿಕಲಿ ಕೊಠಡಿಗೆ ಕ್ಲಿಪ್‌ಬೋರ್ಡ್‌ ನೀಡಿದ್ದಾರೆ.

ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ಸೃಷ್ಟಿಸಲು ಸಾಧ್ಯವಾಗಿದೆ. ಜೊತೆಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯವಾಗಿದೆ. ಶಾಲೆಯಲ್ಲಿ ಟಿ.ವಿ ವ್ಯವಸ್ಥೆ ಇದ್ದು, ಆ ಮೂಲಕ ಕಲಿಕೆಯನ್ನು ಸುಲಭಗೊಳಿಸಿದ್ದೇವೆ ಎನ್ನುತ್ತಾರೆ ಪ್ರಭಾರ ಮುಖ್ಯಶಿಕ್ಷಕಿ ಪಿ.ವಿ.ಶೋಭಾ.

ದಾವಣಗೆರೆ ಉತ್ತರ ಕ್ಷೇತ್ರದ ಕಂದನಕೋವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಣ್ಣ ಬಳಿಸಿರುವುದು
ದಾವಣಗೆರೆ ಉತ್ತರ ಕ್ಷೇತ್ರದ ಕಂದನಕೋವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಗೋಡೆ ಮೇಲೆ ಮಹಾತ್ಮರ ಚಿತ್ರಗಳನ್ನು ಬರೆಸಿರುವುದು
ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಸಂಘ– ಸಂಸ್ಥೆಯವರು ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಜಿ.ಕೊಟ್ರೇಶ್‌ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ
ಬಸವನಕೋಟೆ ಶಾಲೆಗೆ ಮರುಜೀವ
ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಸಂಸ್ಥೆಗಳಿಂದ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಮರುಜೀವ ನೀಡಿದವರು ಸಹ ಶಿಕ್ಷಕ ಬಿ.ಕೆ.ಸತೀಶ್‌. ಬೆಂಗಳೂರಿನ ‘ಕನ್ನಡ ಮನಸುಗಳು’ ಸ್ವಯಂ ಸೇವಾ ಸಂಸ್ಥೆಯ 60 ಜನರ ತಂಡ ಎರಡು ದಿನಗಳ ಶಾಲೆಯಲ್ಲಿಯೇ ಉಳಿದು ಸುಣ್ಣ–ಬಣ್ಣ ಬಳಿದರು. ಕೊಠಡಿಗಳಿಗೆ ಫ್ಯಾನ್‌ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಿದ್ದರು. ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕೃತಜ್ಞತಾ ಟ್ರಸ್ಟ್‌ ₹ 90000 ದೇಣಿಗೆ ನೀಡಿದೆ. ಜಿಂದಾಲ್‌ ಫೌಂಡೇಶನ್‌ ತಲಾ ₹ 20000 ಮೌಲ್ಯದ 5 ಗ್ರೀನ್‌ ಬೋರ್ಡ್‌ ನೀಡಿದೆ. ಇನ್ನೂ ಕೆಲ ಸಂಸ್ಥೆಗಳು ನೆರವು ನೀಡಿವೆ. ಗ್ರಾಮಸ್ಥರು ಹಾಗೂ ಸ್ವತಃ ಶಿಕ್ಷಕ ಸತೀಶ್‌ ಹಣಕಾಸಿನ ನೆರವು ನೀಡಿದ್ದಾರೆ.
ಧೂಳೆಹೊಳೆ ಶಾಲೆಗೆ ಹೈಟೆಕ್‌ ಸ್ಪರ್ಶ
ಹರಿಹರ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶರಣ್‌ಕುಮಾರ್‌ ಹೆಗಡೆ ಅವರ ವಿಶೇಷ ಕಳಕಳಿಯಿಂದಾಗಿ ಸಂಪೂರ್ಣ ಶಿಥಿಲಗೊಂಡಿದ್ದ ಶಾಲೆ ಸುಸ್ಥಿತಿ ತಲುಪಿದೆ. 5  ಕಟ್ಟಡಗಳನ್ನು ನಿರ್ಮಿಸಲು ಶಾಸಕರ ಸಂಸದರು ಮತ್ತಿತರರ ನೆರವು ಪಡೆಯಲಾಗಿದೆ ಬೆಂಗಳೂರಿನ ‘ಇಂಡಿಯಾ ಸುಧಾರ್‌’ ಸಂಸ್ಥೆಯು ₹ 5 ಲಕ್ಷ ವೆಚ್ಚದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಹೈಟೆಕ್‌ ಶೌಚಾಲಯ ನಿರ್ಮಿಸಿಕೊಟ್ಟಿದೆ. ಗ್ರಾಮದ ಬಸವಣ್ಯಪ್ಪ ₹ 5 ಲಕ್ಷದಲ್ಲಿ ಸಭಾ ಭವನ ನಿರ್ಮಿಸಿಕೊಟ್ಟಿದ್ದಾರೆ. ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್‌ ಕಂಪನಿ ಕಾರ್ಗಿಲ್‌ ಸಂಸ್ಥೆ ಕೃತಜ್ಞತಾ ಟ್ರಸ್ಟ್‌ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್‌ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ನೆರವು ದೊರೆತಿದೆ.
‘ನಮ್ಮ ಶಾಲೆ ನಮ್ಮ ಜವಾಬ್ದಾರಿ’
ರೂವಾರಿಗಳು ಬಾಪೂಜಿ ಸಂಸ್ಥೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಸೇರಿ ಗುರುವಂದನೆ ಕಾರ್ಯಕ್ರಮ ಮಾಡಲು ₹ 18 ಲಕ್ಷ ಸಂಗ್ರಹಿಸಿದ್ದೆವು. ಅದರಲ್ಲಿ ₹ 6 ಲಕ್ಷ ಉಳಿದಿತ್ತು. ಆ ಹಣದ ಸದ್ಬಳಕೆ ಕುರಿತು ನಡೆದ ಸಭೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉಪಯೋಗಿಸಲು ನಿರ್ಧರಿಸಿದೆವು. ಅಂತೆಯೇ ಶಾಮನೂರಿನ ಜನತಾ ಕಾಲೊನಿ ಶಾಲೆ ಹಾಗೂ ಕಂದನಕೋವಿ ಗ್ರಾಮದ ಶಾಲೆಯನ್ನು ಅಲಂಕರಿಸಿದ್ದೇವೆ. ಪ್ರತಿವರ್ಷ ಒಂದೊಂದು ಶಾಲೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೇಮಂತ್‌ ಡಿ.ಎಸ್‌. ಬಾಪೂಜಿ ಅಲಮ್ನಿ ಟ್ರಸ್ಟ್‌ ದಾವಣಗೆರೆ ಹೊಸ ಕೆರೆಯಾಗಳಹಳ್ಳಿ ದಾವಣಗೆರೆ ನಗರದಿಂದ 20 ಕಿ.ಮೀ ದೂರದಲ್ಲಿದ್ದು ಅಲ್ಲಿನ ಶಾಲೆಗೆ ಬಡವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆಗಾಗ ಕಾರ್ಯಕ್ರಮಕ್ಕೆ ಹೋದಾಗ ಮೂಲಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿದ್ದೆ. ಶಾಲೆಯ ಅಗತ್ಯಗಳನ್ನು ಶಿಕ್ಷಕರಿಂದ ತಿಳಿದು ಕೊಡಿಸುವ ಕೆಲಸ ಮಾಡಿದೆ. ಈ ಮೂಲಕ ನಾನು ಓದಿದ ಶಾಲೆಗೆ ಕೃತಜ್ಞತೆ ಸಲ್ಲಿಸಲು ಅವಕಾಶ ಸಿಕ್ಕಂತಾಯಿತು. ಎ.ಬಿ.ಸೋಮಶೇಖರಪ್ಪ ಕೃಷಿ ಪರಿಕರಗಳ ವ್ಯಾಪಾರಿ ದಾವಣಗೆರೆ ಸಮಾಜದಿಂದ ನಾವು ಪಡೆದುಕೊಂಡಿದ್ದು ವಾಪಸ್‌ ಕೊಡುವುದು ನಮ್ಮ ಧರ್ಮ. ಒಬ್ಬರಿಂದ ಏನೂ ಮಾಡಲಾಗುವುದಿಲ್ಲ. ನನ್ನ ಕೆಲಸಕ್ಕೆ ನನ್ನ ಸ್ನೇಹಿತರೂ ಕೈ ಜೋಡಿಸಿದ್ದರಿಂದ ಕೈಲಾದಷ್ಟು ನೆರವು ನೀಡಲು ಸಾಧ್ಯವಾಗಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಡಿಪಾಯವಾಗಿದ್ದು ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಮಂಜುನಾಥ್‌ ಕೆ. ರೋಹನ್‌ ಕೇರ್‌ ಫೌಂಡೇಶನ್‌ ಬೆಂಗಳೂರು ಸಮಾನಮನಸ್ಕರು ಒಗ್ಗೂಡಿ ಸ್ವಯಂ ಸೇವಾ ಸಂಸ್ಥೆ ಮೂಲಕ ಶಾಲೆಗಳ ಶಿಕ್ಷಕರು ಹಳೆ ವಿದ್ಯಾರ್ಥಿಗಳ ಮನವಿ ಮೇರೆಗೆ ಪ್ರತಿ ತಿಂಗಳು ಒಂದು ಶಾಲೆಗೆ ಬಣ್ಣ ಬಳಿಯುವ ಕೆಲಸ ಮಾಡುತ್ತೇವೆ. ಪವನ ದರೇಗುಂಡಿ ಕನ್ನಡ ಮನಸುಗಳು ಕರ್ನಾಟಕ ಬೆಂಗಳೂರು ಹರಿಹರ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರು ಶಾಲೆ ಮತ್ತು ವಿದ್ಯಾರ್ಥಿಗಳ ಮೇಲೆ ತೋರಿಸುವ ಕಾಳಜಿ ನಿರ್ವಹಣೆ ಸ್ಪಂದನೆ ಮತ್ತು ಕೊಟ್ಟ ವಸ್ತುಗಳ ಸರಿಯಾದ ಸದ್ಬಳಕೆ ಇವುಗಳಿಂದ ಪ್ರೇರಿತವಾಗಿ ಇಂಡಿಯಾ ಸುಧಾರ್‌ ಸಂಸ್ಥೆಯು ಬೆಂಗಳೂರಿನ ಈಟಿ ಕಂಪನಿಗಳಾದ ಸಿನಾಪ್ಸಿಸ್‌ ಪವರ್‌ ಸ್ಕೂಲ್‌ ಎನ್‌ಫೇಸ್‌ ನೆಕ್ಸ್‌ ಥಿಂಕ್‌ ಇತ್ಯಾದಿ ಸಂಸ್ಥೆಗಳ ಸಹಯೋಗದಲ್ಲಿ ₹ 1.5 ಕೋಟಿಗೂ ಹೆಚ್ಚು ಅನುದಾನದಲ್ಲಿ ಮೂಲಸೌಕರ್ಯಗಳನ್ನು ಒದಗಿಸಿದೆ. ವಿನೋದ್ ಮುರುಗೋಡ್ ಮತ್ತು ಸ್ವಯಂ ಸೇವಕ ಕಿರಣ್ ಕುಮಾರ್ ‘ಇಂಡಿಯಾ ಸುಧಾರ್‘ ಸಂಸ್ಥೆ ಕರ್ನಾಟಕ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.