
ಹರಿಹರ: ಮೊಬೈಲನ್ನು ಹಿತ, ಮಿತವಾಗಿ ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕಿ ಗೌರಮ್ಮ ಎಸ್.ಎಂ. ಹೇಳಿದರು.
ನಗರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶನಿವಾರ ನಡೆದ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
‘ಬದುಕು ಸುಲಭಗೊಳಿಸುವ ಶಕ್ತಿ ಮೊಬೈಲ್ಗಿದೆ. ಅನಿಯಮಿತ ಬಳಕೆ ಗೀಳಿನಿಂದ ಸುವರ್ಣವಾದ ಸಮಯ ವ್ಯರ್ಥವಾಗಲಿದೆ. ಮಾನಸಿಕ ಕ್ಷೋಭೆ, ಆರೋಗ್ಯ ಸಮಸ್ಯೆ ಉಂಟುಮಾಡುವ ಅಪಾಯವೂ ಇದೆ. ಮೊಬೈಲ್ ನಮ್ಮನ್ನು ನಿಯಂತ್ರಿಸುವ ಬದಲು ನಾವು ಅದನ್ನು ನಿಯಂತ್ರಿಸುವಂತ ಆಗಬೇಕು’ ಎಂದು ಆಶಿಸಿದರು.
ಪ್ರಾಚಾರ್ಯ ಶ್ರೀನಿವಾಸ್ ಅಜೂರ್ ಅಧ್ಯಕ್ಷತೆ ವಹಿಸಿದ್ದರು. ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರಾ ಎಸ್.ಟಿ. ಪ್ರಮಾಣಪತ್ರ ವಿತರಿಸಿದರು. ಗ್ರಂಥಪಾಲಕಿ ವೀಣಾ ಎಚ್.ಎಂ., ಸಹಾಯಕ ಗ್ರಂಥಪಾಲಕ ಪಿ.ಆರ್.ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.