ADVERTISEMENT

ಶಿವಲಿಂಗ ಸ್ಥಾನಪಲ್ಲಟ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:21 IST
Last Updated 25 ಆಗಸ್ಟ್ 2021, 9:21 IST
ಹರಿಹರದ ಓಂಕಾರ ಮಠದ ಪಕ್ಕದಲ್ಲಿರುವ ಶಿವಾಲಯದಲ್ಲಿರುವ ಶಿವಲಿಂಗವನ್ನು ಮೂಲ ಸ್ಥಾನದಿಂದ ಬೇರ್ಪಡಿಸಿರುವ ದೃಶ್ಯ.
ಹರಿಹರದ ಓಂಕಾರ ಮಠದ ಪಕ್ಕದಲ್ಲಿರುವ ಶಿವಾಲಯದಲ್ಲಿರುವ ಶಿವಲಿಂಗವನ್ನು ಮೂಲ ಸ್ಥಾನದಿಂದ ಬೇರ್ಪಡಿಸಿರುವ ದೃಶ್ಯ.   

ಹರಿಹರ: ನಗರದ ಓಂಕಾರ ದೇವಸ್ಥಾನದ ಪಕ್ಕದಲ್ಲಿರುವ ಗುಂಡಿ ಸ್ವಾಮೀಜಿ ಸಮಾಧಿ ಸಮೀಪದಲ್ಲಿರುವ ಪುರತಾನ ಶಿವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶಿವಲಿಂಗವನ್ನು ಮೂಲಸ್ಥಾನದಿಂದ ಬೇರ್ಪಡಿಸಿರುವ ಸಂಗತಿ ಮಂಗಳವಾರ ಸಂಜೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಐತಿಹಾಸಿಕ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸ್ನಾನಘಟ್ಟದ ರಸ್ತೆಯಲ್ಲಿರುವ ದೇವಸ್ಥಾನ ಅನೇಕ ವರ್ಷಗಳಿಂದ ಶಿಥಿಲಗೊಂಡಿದ್ದು, ಅರ್ಚಕರು ಮಾತ್ರ ನಿತ್ಯ ಪೂಜೆ ಸಲ್ಲಿಸಿ ಬರುತ್ತಿದ್ದರು.

ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್‍ ಮಾತನಾಡಿ, ‘ಈ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದು ಅನೈತಿಕ ಚಟುವಟಿಕೆ ಹೆಚ್ಚಾಗಿತ್ತು. ಆದಕಾರಣ ಈಚೆಗೆ ದೇವಸ್ಥಾನದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿತ್ತು. ಶಿವಲಿಂಗವನ್ನು ಕಿತ್ತಿಟ್ಟಿರುವುದು ಆಘಾತ ಮೂಡಿಸಿದೆ. ಈ ಕುರಿತು ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಹರೀಹರೇಶ್ವರ ದೇವಸ್ಥಾನ ಸುತ್ತಲಿನ ಪುರತಾನ ದೇವಸ್ಥಾನಗಳನ್ನು ಗುರುತಿಸಿ ಅವುಗಳ ನಿರ್ವಹಣೆಗೆ ಕ್ರಮ ಜರುಗಿಸುವ ಜತೆಗೆ ಸ್ನಾನ ಘಟ್ಟಕ್ಕೆ ತೆರಳುವ ರಸ್ತೆ, ಗಣಪತಿ ವಿಸರ್ಜನೆ ಘಟ್ಟ ಹಾಗೂ ರಥದ ಮನೆ ದುರಸ್ತಿಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹರಿಹರೇಶ್ವರ ದೇವಸ್ಥಾನ ಸಮಿತಿ ಸದಸ್ಯ ರಮೇಶ ನಾಯ್ಕ ಮಾತನಾಡಿ, ‘ಮುಜರಾಯಿ ಇಲಾಖೆ ದೇವಸ್ಥಾನದ ಪಕ್ಕದಲ್ಲಿರುವ ಚಿಕ್ಕ-ಪುಟ್ಟ ದೇವಸ್ಥಾನಗಳ ನಿರ್ವಹಣೆಯ ಕುರಿತು ಕ್ರಮ ಜರುಗಿಸಬೇಕು. ಪುರಾತನ ದೇವಸ್ಥಾನಗಳು ಇತಿಹಾಸದ ಪ್ರತೀಕ ಈ ದೇವಸ್ಥಾನಗಳ ರಕ್ಷಣೆಗೆ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಪುರಾತನ ದೇವಸ್ಥಾನಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿರುವುದು ಆಸ್ತಿಕರ ಭಾವನೆಗಳಿಗೆ ಧಕ್ಕೆಯುನ್ನುಂಟು ಮಾಡುತ್ತಿದೆ. ದೇವಸ್ಥಾನಗಳ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಹರಿಹರೇಶ್ವರ ದೇವಸ್ಥಾನದ ಅರ್ಚಕ ಗುರುರಾಜ್‍, ಸ್ಥಳಿಯರಾದ ರಮೇಶ್‍ ಭಟ್‍, ಗೌತಮ್‍, ಸುನೀಲ್‍, ಮಧು, ಶ‍್ರೀನಿಧಿ, ರಮೇಶ್‍, ಶ್ರೀಧರ್‍ ಭಟ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.