ಹಿರಿಯೂರು: ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, 2023–24 ನೇ ಸಾಲಿನ ಬಜೆಟ್ನಲ್ಲಿ ₹5,300 ಕೋಟಿ ಅನುದಾನ ಮೀಸಲಿಟ್ಟಿದ್ದು, ಸದರಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಪ್ರಧಾನಿ ಹಾಗೂ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ 21,473.67 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿರುತ್ತದೆ. ಸದರಿ ಯೋಜನೆಗೆ ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ಡಿಒಡಬ್ಲ್ಯು ಆರ್, ಆರ್ ಡಿ ಅಂಡ್ ಜಿಆರ್, ಜಲಶಕ್ತಿ ಮಂತ್ರಾಲಯಗಳು ಅನುಮೋದನೆ ನೀಡಿವೆ. ಪ್ರಯುಕ್ತ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಅಂಗೀಕರಿಸುವ ತುರ್ತು ಅಗತ್ಯವಿದೆ. ಬಜೆಟ್ನಲ್ಲಿ ಮೀಸಲಿಟ್ಟಿರುವ ₹5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರೆ ಮಾತ್ರ ಸ್ಥಗಿತಗೊಂಡಿರುವ ಕಾಮಗಾರಿ ಮರುಚಾಲನೆ ಪಡೆಯಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.
‘ಭದ್ರಾ ಮೇಲ್ದಂಡೆ ಯೋಜನೆಯು ಮಧ್ಯ ಕರ್ನಾಟಕ ಭಾಗದ ಮಹತ್ತರ ನೀರಾವರಿ ಯೋಜನೆಯಾಗಿದ್ದು, ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಸೇರಿ ಒಟ್ಟು 29.90 ಟಿಎಂಸಿ ಅಡಿ ನೀರನ್ನು ಲಿಫ್ಟ್ ಮಾಡಿ ಒಟ್ಟಾರೆ ₹2.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿಗೆ ಬಳಸಲಾಗುತ್ತದೆ. 367 ಸಣ್ಣ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಪ್ರಯುಕ್ತ ಇಂತಹ ಮಹತ್ವಪೂರ್ಣ ಯೋಜನೆ ತಡವಾದಷ್ಟೂ ರೈತರಿಗೆ ತುಂಬಲಾರದ ನಷ್ಟವಾಗುತ್ತದೆ. ಆಹಾರೋತ್ಪಾದನೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ’ ಎಂದು ತಿಮ್ಮಯ್ಯ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.