
ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕರೆಯಲಾಗಿದ್ದ ದೂರು ಸ್ವೀಕಾರ ಸಭೆಯಲ್ಲಿ ಅಧೀಕ್ಷಕರು ಸಾರ್ವಜನಿಕರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಹೊನ್ನಾಳಿ: ‘ಅವಳಿ ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ವಿಳಂಬ ನೀತಿ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾರತಮ್ಯ ನೀತಿ ಅನುಸರಿಸುವುದು, ಕಳಪೆ ಕಾಮಗಾರಿ, ಹಣ ದುರುಪಯೋಗ ಕುರಿತ ದೂರುಗಳನ್ನು ಸಲ್ಲಿಸುವವರು ಪ್ರಪತ್ರ– 1 ಮತ್ತು 2 ರಲ್ಲಿ ಅಫಿಡವಿಟ್ನೊಂದಿಗೆ ಸಲ್ಲಿಸಬೇಕು’ ಎಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ಒಂದು ವೇಳೆ ತಾವು ಕೊಡುವ ದೂರುಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೆ ಅಂತಹ ದೂರುಗಳನ್ನು ಸ್ವೀಕರಿಸುವುದಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅಧಿಕಾರಿಗಳು ಹಣ, ಲಂಚ ಕೇಳುತ್ತಿದ್ದಲ್ಲಿ ಅಂತಹವರ ವಿರುದ್ಧ ಲಿಖಿತ ದೂರು ನೀಡಬಹುದು’ ಎಂದು ಹೇಳಿದರು.
ಹೊನ್ನಾಳಿಯಲ್ಲಿ ಲಿಖಿತವಾಗಿ ಐದು ದೂರುಗಳನ್ನು ಸ್ವೀಕರಿಸಲಾಗಿದೆ. ಮೌಖಿಕವಾಗಿ ಮೂರು ದೂರುಗಳನ್ನು ಆಲಿಸಲಾಗಿದ್ದು, ಅವುಗಳನ್ನು ನಾವು ನೋಂದಾಯಿಸಿಕೊಂಡಿದ್ದೇವೆ ಎಂದು ಹೇಳಿದರು.
‘ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಸಭೆ ಕರೆದಾಗ ತಾಲ್ಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು. ಬರುವಾಗ ಇಲಾಖೆಯ ಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರಬೇಕು. ವಿಚಾರಣೆ ವೇಳೆ ಸಮರ್ಪಕವಾದ ಮಾಹಿತಿ ನೀಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಬರದೇ ತಮ್ಮ ಕೆಳಗಿನ ಸಿಬ್ಬಂದಿ ಮೂಲಕ ಮಾಹಿತಿ ಕಳುಹಿಸುತ್ತಿರುವುದು ಸಮಂಜಸವಲ್ಲ’ ಎಂದರು.
ಲೋಕಾಯುಕ್ತ ಡಿವೈಎಸ್ಪಿ ಕಲಾವತಿ, ಇನ್ಸ್ಪೆಕ್ಟರ್ ಗುರುಬಸವರಾಜ್, ಪ್ರಭು ಸೂರಿನ ಹಾಗೂ ಸರಳಾ ಉಪಸ್ಥಿತರಿದ್ದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.