
ಹರಿಹರ: ‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಅವುಗಳನ್ನು ಜನ ವಸತಿ ಇಲ್ಲದ ಪ್ರದೇಶದಲ್ಲಿ ಇಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಎನ್. ಹೇಳಿದರು.
ಬೀದಿ ನಾಯಿಗಳನ್ನು ಸೆರೆ ಹಿಡಿದ ನಂತರ ಅವುಗಳನ್ನು ಸಾಕುವ ಸ್ಥಳದ ಪರಿಶೀಲನೆಗಾಗಿ ಪಶುಪಾಲನ ಇಲಾಖೆ ಅಧಿಕಾರಿಗಳೊಂದಿಗೆ ನಗರಕ್ಕೆ ಮಂಗಳವಾರ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಗರದಲ್ಲಿ ಬೀದಿ ನಾಯಿಗಳಿಂದ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ನಾಯಿ ಕಡಿತದಿಂದ ಸಾವಾದರೆ ₹ 5 ಲಕ್ಷ ಪರಿಹಾರ ಕೊಡಬೇಕೆಂಬ ನಿಯಮವಿದೆ. ಪರಿಹಾರ ಕೊಡುವುದು ಮುಖ್ಯವಲ್ಲ. ಆದರೆ, ಯಾವುದೇ ಪ್ರಾಣ ಹಾನಿ ಆಗಬಾರದೆಂಬುದು ಮುಖ್ಯ’ ಎಂದು ಹೇಳಿದರು.
‘ನಗರದ ಎರಡ್ಮೂರು ಸ್ಥಳಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಯಾವುದು ಸೂಕ್ತವಾಗುತ್ತದೆ ಎಂಬುದನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಾಯಿಗಳನ್ನು ಸೆರೆ ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವವರಿಗೆ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ’ ಎಂದು ತಿಳಿಸಿದರು.
‘ನಗರದಲ್ಲಿರುವ ಶಾಲೆ, ಕಾಲೇಜು, ಹಾಸ್ಟೆಲ್, ಸರ್ಕಾರಿ ಕಚೇರಿ ಹಾಗೂ ಇತರೆ ಸಾರ್ವಜನಿಕ ಸಂಸ್ಥೆಗಳಲ್ಲಿ ಆ ಭಾಗದಲ್ಲಿರುವ ಬೀದಿ ನಾಯಿಗಳ ಸಂಖ್ಯೆಯನ್ನು ಲೆಕ್ಕಾ ಹಾಕಲು ಆಯಾ ಸಂಸ್ಥೆಯ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು’ ಎಂದರು.
‘ರೇಬಿಸ್ ಕಾಯಿಲೆ ಇರುವ ನಾಯಿ ಕಚ್ಚಿದರೆ ತಕ್ಷಣ ನಾಯಿ ಕಚ್ಚಿದ ಜಾಗವನ್ನು ನೀರು ಹಾಕಿ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ನಂತರ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ರೇಬಿಸ್ ಕಾಯಿಲೆ ಇರುವ ನಾಯಿ ಕಚ್ಚಿ ನಿರ್ಲಕ್ಷ್ಯ ವಹಿಸಿದರೆ ಸಾವಾಗುವ ಸಾಧ್ಯತೆ ಹೆಚ್ಚು’ ಎಂದು ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ.ಮಹೇಶ್ ಹೇಳಿದರು.
‘ಸ್ಥಗಿತಗೊಂಡಿರುವ ನಗರಸಭೆ ನೂತನ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. 6 ತಿಂಗಳ ಒಳಗೆ ನೂತನ ಕಚೇರಿಯ ಉದ್ಘಾಟನೆ ಮಾಡಬೇಕಿದೆ. ನಗರಸಭೆಯಲ್ಲಿನ ಸಿಬ್ಬಂದಿ ಕೊರತೆ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗಿದೆ. ಸರ್ವರ್ ಸಮಸ್ಯೆ ಎರಡು ದಿನಗಳಲ್ಲಿ ಬಗೆಹರಿಯಲಿದೆ’ ಎಂದು ಮಹಾಂತೇಶ್ ಪ್ರಶ್ನೆಗೆ ಉತ್ತರಿಸಿದರು.
ಪೌರಾಯುಕ್ತ ಎಂ.ಪಿ.ನಾಗಣ್ಣ, ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ಬಿ.ಏಕನಾಥ್, ಹಿರಿಯ ಆರೋಗ್ಯ ನಿರೀಕ್ಷಕರಾದ ವೀರೇಶ್, ನವೀನ್, ಅಮ್ರೀನ್ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.