
ದಾವಣಗೆರೆ: ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿ ಹರಿಹರದ ಮಾಜಿ ಶಾಸಕ, ದೊಡ್ಡಬಾತಿಯ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಚ್.ಎಸ್. ಶಿವಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಮಹಾಮಂಡಳದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಈಚೆಗೆ ಚುನಾವಣಾ ಪ್ರಕ್ರಿಯೆ ನಡೆಯಿತು. ಬೆಳಗಾವಿಯ ಚಿಕ್ಕೋಡಿ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸಂದೀಪ್ ಪಾಟೀಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಹಾಮಂಡಳದ ನಿರ್ದೇಶಕ ಸ್ಥಾನಗಳಿಗೆ ಜ.11ರಂದು ನಡೆದ ಚುನಾವಣೆಯಲ್ಲಿ ಎಚ್.ಎಸ್. ಶಿವಶಂಕರ್ 5ನೇ ಬಾರಿಗೆ ಪುನರಾಯ್ಕೆ ಆಗಿದ್ದರು. ಸಹಕಾರಿ ತತ್ವದ ಆಧಾರದಲ್ಲಿ ಸ್ಥಾಪನೆಯಾದ ರಾಜ್ಯದ 20 ಸಕ್ಕರೆ ಕಾರ್ಖಾನೆಗಳು ಮಹಾಮಂಡಳದ ವ್ಯಾಪ್ತಿಯಲ್ಲಿವೆ.
‘20 ವರ್ಷಗಳಿಂದ ಮಹಾಮಂಡಳದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಹಕಾರ ತತ್ವದಡಿ ರಚನೆಯಾದ ಸಕ್ಕರೆ ಕಾರ್ಖಾನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನ ನಿರೀಕ್ಷೆಯಲ್ಲಿವೆ. ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಸಿಕ್ಕರೆ ಸಹಕಾರ ಸಕ್ಕರೆ ಕಾರ್ಖಾನೆಗಳಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶ್ರಮಿಸಲಿದ್ದೇನೆ’ ಎಂದು ಶಿವಶಂಕರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.