ADVERTISEMENT

ನನಗೆ ದಾವಣಗೆರೆಯ ಉಸ್ತುವಾರಿಯೇ ಬೇಡ: ಬೈರತಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 3:07 IST
Last Updated 21 ಮೇ 2021, 3:07 IST
   

ದಾವಣಗೆರೆ: ‘ಶ್ರೀಮಂತರು ಯಾರೂ ಸಾಯುತ್ತಿಲ್ಲ. ಬಡವರೇ ಸಾಯುತ್ತಿದ್ದಾರೆ. ಆದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಬೆಡ್‌ ಇಲ್ಲ, ಬೆಡ್‌ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಮಾಧ್ಯಮದವರೂ ಅದನ್ನೇ ಪ್ರಶ್ನಿಸುತ್ತಿದ್ದಾರೆ. ನೀವು ಮಾನವೀಯತೆ ಇಟ್ಟುಕೊಂಡು ಜನಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡದೇ ಇದ್ದರೆ ನಾನು ಏನು ಉತ್ತರ ಕೊಡಲಿ? ದಾವಣಗೆರೆಯ ಉಸ್ತುವಾರಿಯೇ ಬೇಡ ಎಂದು ಬೇಕಿದ್ದರೆ ನಾಳೆಯೇ ಹೇಳುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಅವರು ಅಸಮಾಧಾನ ತೋಡಿಕೊಂಡಿದ್ದಾರೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಶೇ 75 ಬೆಡ್‌ಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಾಗಿ ಇಡಲಾಗಿದೆಯೇ, ಅದರಲ್ಲಿ ಎಷ್ಟು ಬಳಕೆಯಾಗಿದೆ’ ಎಂದು ಪ್ರಶ್ನಿಸಿದರು. ಬಾಪೂಜಿ, ಎಸ್.ಎಸ್‌. ಆಸ್ಪತ್ರೆಗಳಲ್ಲಿ ಇರುವ ಬೆಡ್‌ಗಳ ಮಾಹಿತಿ ಪಡೆದು, ‘ಕನಿಷ್ಠ 500 ಬೆಡ್‌ ಕೂಡ ಬಳಸಿಕೊಂಡಿಲ್ಲ. ಸುಮಾರು 150 ಬೆಡ್‌ಗಳಷ್ಟೇ ಬಳಸಿಕೊಳ್ಳಲಾಗಿದೆ. ನೀವು ಖಾಸಗಿಯವರ ಜತೆಗೆ ಶಾಮೀಲಾಗಿದ್ದೀರಾ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

‘ದಾವಣಗೆರೆಯನ್ನು ನಾನೇ ಉಸ್ತುವಾರಿಗೆ ಆಯ್ಕೆ ಮಾಡಿಕೊಂಡಿದ್ದೆ. ಸ್ವಾಭಿಮಾನ ಬಿಟ್ಟು ಬದುಕುವವನು ನಾನಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಿದ್ದರಾಮಯ್ಯರನ್ನೇ ಬಿಟ್ಟು ಬಂದವನು ನಾನು. ನಾಳೆಯೇ ಈ ಉಸ್ತುವಾರಿಯನ್ನೂ ಬಿಡುತ್ತೇನೆ’ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಕೂಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಖಾಸಗಿ ಆಸ್ಪತ್ರೆಗಳ ಬೆಡ್‌ಗಳನ್ನು ಯಾಕೆ ಬಳಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.

‘ನಾನೇ ಹಲವರಿಗೆ ಬೆಡ್‌ ಕೊಡಿಸಲು ಪ್ರಯತ್ನಿಸಿದ್ದೆ. ಬೆಡ್‌ ಸಿಗದೇ ನನಗೆ ಗೊತ್ತಿರುವ 10–15 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಕೂಡ ಬೆಡ್‌ ಸಮಸ್ಯೆಯನ್ನು ತೆರೆದಿಟ್ಟರು.

‘ಈ ಬಗ್ಗೆ ನಾಳೆ ಚರ್ಚೆ ಮಾಡೋಣ. ನೀವು ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿರಬೇಕು’ ಎಂಸು ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಪ್ರೊ. ಲಿಂಗಣ್ಣ, ಎಸ್‌.ಎ, ರವೀಂದ್ರನಾಥ್‌ ಸಮಾಧಾನ ಪಡಿಸಿ ಪತ್ರಿಕಾಗೋಷ್ಠಿ ನಡೆಯುವ ಸ್ಥಳಕ್ಕೆ ಕರೆದುಕೊಂಡು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.