ದಾವಣಗೆರೆ: ಜಾನಪದ ಶಕ್ತಿ ದೇವತೆಗಳ ಮೇಲೆ ಜನಪದರಿಗೆ ಅಚಲವಾದ ನಂಬಿಕೆ ಇದೆ. ಅನೇಕ ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ಜನಪದರು ಪ್ರಮುಖರು. ಅವರು ತಮ್ಮ ಸುಂದರವಾದ ಕಂಠ ಸಿರಿಯಿಂದ ದೇವತೆಗಳ ಆರಾಧನೆಯನ್ನು ಅವರವರ ನಂಬಿಕೆಗೆ ಅನುಗುಣವಾಗಿ ಮಾಡುತ್ತಾರೆ ಎಂದು ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಹೇಳಿದರು.
ಕನ್ನಡ ಜಾನಪದ ಪರಿಷತ್ತು, ತಾಲ್ಲೂಕು ಘಟಕ ಹಾಗೂ ಅದಮ್ಯ ಕಲಾ ಸಂಸ್ಥೆ ಭಾನುವಾರ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಶಕ್ತಿ ದೇವತೆಗಳ ಪರಿಚಯಾತ್ಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದರ ದೃಷ್ಟಿಯಲ್ಲಿ ದೇವತೆಯು ಅಗೋಚರ ಮತ್ತು ಅತೀಮಾನುಷ ಶಕ್ತಿಯುಳ್ಳ ಭಗವಂತನಲ್ಲ. ಆಕೆಗೂ ಮನುಷ್ಯರಂತೆ ಇತಿ-ಮಿತಿಯನ್ನು ಹಾಕಿ ನಡೆಸಿಕೊಳ್ಳುತ್ತಾರೆ. ಈ ಪರಂಪರೆ ಉಳಿಯಬೇಕು ಎಂದರು.
ಜಾನಪದ ಪರಿಷತ್ತು ಮತ್ತು ಅದಮ್ಯ ಕಲಾ ಸಂಸ್ಥೆಗಳ ಅಧ್ಯಕ್ಷೆ ಗೀತಾ ಬಿ. ಮಾಲತೇಶ್, ‘ಹಿರಿದೇವತೆ, ಹೇಮಾಂಬೆ, ಚೌಡೇಶ್ವರಿ, ಹೊನ್ನಾಂಬೆ, ಬಿಬ್ಗಾದೇವಿ, ಬೆಟ್ಟದ ಚಾಮುಂಡಿ, ಕಾಳಾಂಬೆ ಹೀಗೆ ಏಳು ಜನ ಅಕ್ಕ-ತಂಗಿಯರ ಅಷ್ಟೂ ಜೀವನ ಚರಿತ್ರೆಯನ್ನು ಜನಪದರು ಹಾಡುತ್ತಾರೆ. ಇಂತಹ ಉತ್ಕೃಷ್ಟವಾದ ಸಂಸ್ಕೃತಿಯನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನವನ್ನು ಜಾನಪದ ಪರಿಷತ್ತು ಮಾಡುತ್ತಿದೆ’ ಎಂದು ಹೇಳಿದರು.
ಹಿರಿಯ ನಾಗರಿಕರಾದ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಸಿಂಧನೂರಿನ ಯರಿತಾತಾ ಸ್ವಾಮಿ ಮತ್ತು ಮುರಿಗೆಮ್ಮ, ಬಿ.ಎಂ. ಪೃಥ್ವಿ, ವೀರೇಶ್ ಉಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.