ದಾವಣಗೆರೆ: ಹಳ್ಳಿಗಳಲ್ಲಿ ಪ್ರತಿದಿನ ಎರಡು ಮೂರು ಜನ ಸಾಯುತ್ತಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೇ, ಯಾವುದೇ ಆಸ್ಪತ್ರೆಗೆ ಹೋಗದೇ ಮನೆಯಲ್ಲೇ ಇರುವವರರೇ ಈ ರೀತಿ ಮೃತಪಡುತ್ತಿದ್ದಾರೆ. ಹಾಗಾಗಿ ಕೊರೊನಾ ಲಕ್ಷಣ ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಈಚೆಗೆ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಶೇ 60ರಷ್ಟು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಇದಲ್ಲದೇ ಪರೀಕ್ಷೆಗೊಳಗಾಗದ ಪ್ರಕರಣಗಳು ಇನ್ನೂ ಜಾಸ್ತಿ ಇವೆ. ಏನಾದರೂ ಅನಾರೋಗ್ಯ ಉಂಟಾದರೆ ತಮಗೆ ಪರಿಚಯ ಇರುವ ಖಾಸಗಿ ವೈದ್ಯರು, ಇಲ್ಲವೇ ಮೆಡಿಕಲ್ ಶಾಪ್ನಿಂದ ಗುಳಿಗೆ ತೆಗೆದುಕೊಂಡು ಸುಮ್ಮನಿರುತ್ತಾರೆ. ಇದು ಬಹಳ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
‘ಕೊರೊನಾ ಪರೀಕ್ಷೆ ಮಾಡಿಸಲು ನಮ್ಮ ತಂಡ ಬಂದಾಗ ಪರೀಕ್ಷೆ ಬೇಡ ಎಂದು ಯಾರೂ ಹೇಳಬಾರದು. ಪರೀಕ್ಷೆ ಮಾಡಿಸಲು ಸಹಕಾರ ನೀಡಬೇಕು. ಅಗತ್ಯ ಇರುವವರು ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡು ಅದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.