ದಾವಣಗೆರೆ: ಜಿಲ್ಲೆಯ ವಿವಿಧೆಡೆ ರೈತರು ಭತ್ತದ ಸಸಿ ಮಡಿ ತಯಾರಿಗೆ ಸಿದ್ಧತೆ ನಡೆಸಿದ್ದಾರೆ. ಬೇಸಿಗೆಯ ಹೊಸ್ತಿಲಲ್ಲಿ ಅಡಿಕೆ ತೋಟಗಳಿಗೆ ಅಗತ್ಯವಾಗಿ ನೀರು ಬೇಕಿದೆ. ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಶೀಘ್ರ ನೀರು ಹರಿಸದಿದ್ದರೆ ಭತ್ತ ಬೆಳೆಯುವುದು ಕಷ್ಟ. ಅಡಿಕೆ ತೋಟಗಳಿಗೆ ಹಾನಿಯಾಗುವ ಸಂಭವವೂ ಇದೆ.
ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಕಳೆದ ನವೆಂಬರ್ 29ರಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಮತ್ತೆ ಕಾಲುವೆ ಮೂಲಕ ಶೀಘ್ರ ನೀರು ಹರಿಸಬೇಕು ಎಂಬುದು ರೈತರ ಒತ್ತಾಯ.
ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರಿದ್ದು, ಈಗಾಗಲೇ ಹೊಳೆಸಾಲು, ಅಚ್ಚುಕಟ್ಟು, ತೋಟ, ತಗ್ಗು ಪ್ರದೇಶದ ಜಮೀನು ಮತ್ತು ಕೊಳವೆಬಾವಿ ವ್ಯವಸ್ಥೆ ಇರುವ ರೈತರು ಭತ್ತದ ಸಸಿ ಮುಡಿ ತಯಾರಿ ನಡೆಸಿದ್ದಾರೆ. ಕೆಲವರು ಈಗಾಗಲೇ ಭತ್ತದ ಬೀಜ ಚೆಲ್ಲಿದ್ದಾರೆ.
ಇನ್ನುಳಿದ ರೈತರು ಸಸಿಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಇನ್ನೂ ಕೆಲವರು ಬೀಜ ಉಗ್ಗುವ ಮೂಲಕ ಚೆಲ್ಲುವ ಪದ್ಧತಿ ಅನುಸರಿಸಲು ನೀರು ಹರಿಸುವುದನ್ನೇ ಕಾಯುತ್ತಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 183 ಅಡಿ ಇದೆ. ನೀರು ಬಿಡುವುದು ತಡವಾದರೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆಗೆ ಅನಾನುಕೂಲವಾಗುತ್ತದೆ. ನೀರು ಬಿಡುವುದು ವಿಳಂಬವಾದರೆ ಈಗಾಗಲೇ ಸಸಿ ಮುಡಿ ಸಿದ್ಧಪಡಿಸಿದವರಿಗೂ, ನೀರು ಬಿಟ್ಟ ತಕ್ಷಣ ಬೀಜ ಚೆಲ್ಲುವವರಿಗೂ 1 ತಿಂಗಳು ವ್ಯತ್ಯಾಸ ಆಗುತ್ತದೆ.
ಅಚ್ಚುಕಟ್ಟು ಭಾಗದ ರೈತರು ಭದ್ರಾ ನೀರನ್ನೇ ಆಶ್ರಯಿಸಿದ್ದಾರೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯಲಾಗುತ್ತದೆ. ಇದರ ಜತೆಗೆ ಅಡಿಕೆ ಹಾಗೂ ಅಲ್ಪ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಭದ್ರಾ ಜಲಾಶಯದ ನೀರಿನ ಲಭ್ಯತೆಯಿಂದ ಜಿಲ್ಲೆಯಲ್ಲಿ ಅಂದಾಜು 1.60 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.
ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ ಶುಕ್ರವಾರ ಕಾಡಾ ಅಧ್ಯಕ್ಷ ಹಾಗೂ ಅಧಿಕಾರಿಗಳೊಂದಿಗೆ ವರ್ಚ್ಯುಯಲ್ ಮೂಲಕ ಸಮಾಲೋಚನಾ ಸಭೆ ನಡೆಸಿದರು. ಐಸಿಸಿ ಸಭೆ ಹಾಗೂ ನೀರು ಅಗತ್ಯದ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
‘ಕೊಳವೆಬಾವಿ ನೀರು ಅವಲಂಬಿಸಿ ಕೆಲವರು ಅಡಿಕೆ ತೋಟ ಮಾಡಿಕೊಂಡಿದ್ದಾರೆ. ಬಿಸಿಲು ಇರುವ ಕಾರಣ ಅಡಿಕೆ ತೋಟಗಳಿಗೆ ತಕ್ಷಣ ನೀರು ಬೇಕು. ಭತ್ತದ ಸಸಿ ಮಡಿ ತಯಾರಿಗೂ ನೀರು ಬೇಕಿದೆ. ಶೀಘ್ರ ಕಾಡಾ ಸಭೆ ಕರೆದು ನೀರಿನ ವೇಳಾಪಟ್ಟಿ ಬಿಡುಗಡೆ ಮಾಡಬೇಕು’ ಎಂದು ಮಲ್ಲನಾಯಕನಹಳ್ಳಿಯ ರೈತ ರೇವಣಸಿದ್ದಪ್ಪ ಒತ್ತಾಯಿಸಿದರು.
‘120 ದಿನ ನೀರು ಬಿಟ್ಟು ಮತ್ತೆ ಬಿಡುವು ನೀಡಿ ಮತ್ತೆ 120 ದಿನ ನೀರು ಬಿಡುಗಡೆ ಮಾಡಲು ಯೋಜಿಸಲಾಗಿದೆ. ರೈತ ಮುಖಂಡರ ಸಲಹೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕಾಡಾ ಅಧ್ಯಕ್ಷ ಡಾ. ಅಂಶುಮಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಒಂದು ಭಾಗದವರು ಈಗ ಇನ್ನೊಂದು ಭಾಗದವರು ಸ್ವಲ್ಪ ತಡವಾಗಿ ನೀರು ಬಿಡುವಂತೆ ಮನವಿ ಮಾಡುತ್ತಿದ್ದಾರೆ. ಐಸಿಸಿ ಸಭೆಯಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗುವುದುಡಾ. ಅಂಶುಮಂತ್ ಕಾಡಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.