ADVERTISEMENT

ಸ್ತ್ರೀಗೆ ಪಾರಿತೋಷಕವಲ್ಲ, ಗೌರವ ಬೇಕು: ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 14:49 IST
Last Updated 8 ಮಾರ್ಚ್ 2025, 14:49 IST

ದಾವಣಗೆರೆ: ‘ಮಹಿಳೆಯರಿಗೆ ಯಾವುದೇ ಪಾರಿತೋಷಕ ಕೊಡುವುದು ಬೇಕಿಲ್ಲ. ಅವರಿಗೆ ಸಮಾಜದಲ್ಲಿ ಗೌರವ ನೀಡಿದರೆ ಸಾಕು. ಈ ಗೌರವವನ್ನೇ ಸ್ತ್ರೀ ತನ್ನ ಸಾಧನೆಯ ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾಳೆ’ ಎಂದು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ನಬಾರ್ಡ್‌ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕುಟುಂಬವನ್ನು ಮುನ್ನಡೆಸುವ ಮಹಿಳೆ ತ್ಯಾಗ ಮತ್ತು ಸಹನೆಯ ಪ್ರತೀಕವಾಗಿದ್ದಾಳೆ. ಮಹಿಳೆಯರು ಆರ್ಥಿಕವಾಗಿ ಮುನ್ನಡೆದರೆ ಪುರುಷರಿಗೆ ಸಮಾನವಾಗಿ ಬದುಕಲು ಸಾಧ್ಯವಿದೆ. ಪುರುಷರಿಗೆ ಇರುವ ಎಲ್ಲ ಸೌಲಭ್ಯ ಹಾಗೂ ಸ್ವಾತಂತ್ರ್ಯ ಮಹಿಳೆಗೆ ಸಿಗಬೇಕು. ಇದಕ್ಕೆ ಹೋರಾಟ ಮಾಡುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರು ವೇತನ ಪಡೆಯುವುದಿಲ್ಲ. ನಿತ್ಯ ಬೆಳಿಗ್ಗೆಯಿಂದ ರಾತ್ರಿಯವರೆಗೆ ಮನೆಯ ಕೆಲಸ ಮಾಡುತ್ತಾರೆ. ಕಸ ಗುಡಿಸುವ, ಪಾತ್ರೆ ತೊಳೆಯುವ, ಮಕ್ಕಳ ಪಾಲನೆ ಮಾಡುವ ಕಾರ್ಯಕ್ಕೆ ಬೆಲೆ ಕಟ್ಟಲಾಗದು. ಮಹಿಳೆಯ ಈ ಸೇವೆಯನ್ನು ಸಮಾಜ ಗೌರವಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ರಾಜಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದರೆ ಇನ್ನಷ್ಟು ಸುಧಾರಣೆ ತರಲು ಸಾಧ್ಯವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮ ಕೌಸರ್, ‘ಮಹಿಳೆ ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲ. ಬಾಹ್ಯಾಕಾಶ, ರಾಜಕಾರಣ, ಪರಿಸರ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾದ ಸ್ಥಾನ ಪಡೆದಿದ್ದಾಳೆ. ಮಹಿಳೆ ಎಲ್ಲ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲಳು. ಪುರುಷ ಮತ್ತು ಮಹಿಳೆಯರಿಗೆ ಇಂತಹದೇ ಕಾರ್ಯ ಎಂಬ ನಿಗದಿ ಇಲ್ಲ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ, ನಿರೂಪಣಾಧಿಕಾರಿ ಗುರುಪ್ರಸಾದ್, ಸಿಡಿಪಿಒ ಅಭಿಕುಮಾರ್, ಸ್ತ್ರಿ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.