ADVERTISEMENT

ಕಲಾವಿದರ ಬಾಕಿ ₹17 ಲಕ್ಷ ಬಿಡುಗಡೆ ಮಾಡಿ

ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 7:35 IST
Last Updated 11 ನವೆಂಬರ್ 2020, 7:35 IST

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲೆಯ ಕಲಾವಿದರಿಗೆ ಮೂರು ವರ್ಷಗಳಿಂದ ₹17 ಲಕ್ಷ ಬಾಕಿ ಇದ್ದು, ಕೂಡಲೇ ಬಿಡುಗಡೆ ಮಾಡುವಂತೆ ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕ ಮನವಿ ಮಾಡಿತು.

‘ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಕಲಾವಿದರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದ್ದು, ನಾಟಕ, ಕಾರ್ಯಕ್ರಮಗಳು ಇಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜನ ಹಣ ಬಾಕಿ ಇದ್ದು, ಕೂಡಲೇ ಅದನ್ನು ಮಂಜೂರು ಮಾಡಬೇಕು’ ಎಂದು ಒಕ್ಕೂಟದ ಅಧ್ಯಕ್ಷ ಎನ್.ಎಸ್. ರಾಜು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಒತ್ತಾಯಿಸಿದರು.

‘ಕೋವಿಡ್ ನಂತರ ನಾಡಿನ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಕಲಾವಿದರು ನಿಷ್ಕ್ರಿಯಗೊಂಡಿದ್ದು, ಇಲಾಖೆಯು ನೀಡುತ್ತಿದ್ದ ಕಾರ್ಯಕ್ರಮಗಳನ್ನೇ ನಂಬಿಕೊಂಡಿದ್ದ ಬಂದಿದ್ದ ವೃತ್ತಿ ರಂಗಭೂಮಿ, ಜಾನಪದ ಮತ್ತು ಬಯಲಾಟ ಕಲಾವಿದರು ಈಗ ಆರ್ಥಿಕವಾಗಿ ಕುಸಿದುಹೋಗಿದ್ದಾರೆ. ಈಗ ಕೋವಿಡ್ ಸೋಂಕು ಇಳಿಮುಖ ಕಾಣುತ್ತಿದ್ದು, ಇಲಾಖೆಯು ಕಲಾವಿದ
ರಿಗೆ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅವರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ADVERTISEMENT

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಸ್ತುತ ವೀರಗಾಸೆ ಕಲಾವಿದರ ತಂಡಕ್ಕೆ ₹20 ಸಾವಿರ ಮತ್ತು ವೃತ್ತಿ ರಂಗಭೂಮಿ ಕಲಾವಿದರಿಗೆ ₹35 ಸಾವಿರ ನೀಡುತ್ತಿದ್ದು, ಇದು ಸಾಲುತ್ತಿಲ್ಲ. ಆದ್ದರಿಂದ ವೀರಗಾಸೆ ಕಲಾವಿದರ ತಂಡಕ್ಕೆ ₹25 ಸಾವಿರದಿಂದ ₹30 ಸಾವಿರಕ್ಕೆ ಮತ್ತು ನಾಟಕ ತಂಡದ ಕಲಾವಿದರಿಗೆ ₹60 ಸಾವಿರ ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು. ಕಲಾವಿದರಾದ ಎಚ್.ಮೆಹಬೂಬ್ ಅಲಿ, ಬಿ.ಹನುಮಂತಚಾರಿ, ಬಿ.ಇ.ತಿಪ್ಪೇಸ್ವಾಮಿ, ಬಲ್ಲೂರು ಮಂಜಪ್ಪ,ಜಿ. ಮೂಗಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.