
ಜಗಳೂರು: ಪಟ್ಟಣದ ಮಧ್ಯೆ ಹಾದುಹೋಗುವ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಮಧ್ಯ ಭಾಗದಿಂದ 69 ಅಡಿಗೆ ಏಕರೂಪದಲ್ಲಿ ವಿಸ್ತರಿಸಬೇಕು ಎಂದು ಆಗ್ರಹಿಸಿ ರಸ್ತೆ ವಿಸ್ತರಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕಾಮಗಾರಿ ಮೂರು ತಿಂಗಳಿನಿಂದ ನಡೆಯುತ್ತಿದ್ದು, ಕೆಲವೆಡೆ 50 ಅಡಿ, ಮತ್ತೆ ಕೆಲವೆಡೆ ಕೇವಲ 35 ಅಡಿ ವಿಸ್ತರಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಆತುರಾತುರವಾಗಿ ಚರಂಡಿ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ. ಎಲ್ಲಾ ಕಡೆಯಲ್ಲಿ ಮಧ್ಯ ಭಗದಿಂದ 69 ಅಡಿ ವಿಸ್ತರಣೆ ಮಾಡಬೇಕು ಎಂದು ಪ್ರತಿಭಟನಕಾರರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.
ವಾಹನ ಸಂಚಾರ ಸ್ಥಗಿತಗೊಂಡು ಸಮಸ್ಯೆಯಾಯಿತು. ಮಧ್ಯ ಪ್ರವೇಶಿಸಿದ ಪೊಲೀಸರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯಿರಿ ಎಂದು ನೀಡಿದ ಸಲಹೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.
ಸಮಿತಿ ಮುಖಂಡರೊಂದಿಗೆ ಮಾತನಾಡಿದ ಶಾಸಕ ಬಿ. ದೇವೇಂದ್ರಪ್ಪ, ‘ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕಟ್ಟಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಿದ್ದು, ಮಾಲೀಕರ ಪಟ್ಟಿ ತಯಾರಿಸಲಾಗುತ್ತಿದೆ. ಅರ್ಹರಿಗೆ ಪರಿಹಾರ ಕೊಟ್ಟು ಕಟ್ಟಡ ತೆರವುಗೊಳಿಸಲಾಗುವುದು. ಮಳೆ ಬಂದರೆ ಸಮಸ್ಯೆ ಆಗುತ್ತದೆ. ಸದ್ಯ ಚರಂಡಿ ಕಾಮಗಾರಿ ಕೈಗೊಳ್ಳಲು ಅನುವು ಮಾಡಿಕೊಡಬೇಕು’ ಎಂದರು.
ರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸಣ್ಣೋಬಯ್ಯ, ಪದಾಧಿಕಾರಿಗಳಾದ ಆರ್.ಓಬಳೇಶ್, ಎಸ್ಎಫ್ಐ ಅಧ್ಯಕ್ಷ ಅನಂತರಾಜ್, ರೈತ ಸಂಘದ ಅಧ್ಯಕ್ಷ ಕುಮಾರ್, ಕರುನಾಡ ವೇದಿಕೆ ಅಧ್ಯಕ್ಷ ಜೆ.ಮಹಾಲಿಂಗಪ್ಪ, ತುಪ್ಪದಹಳ್ಳಿ ಸಿದ್ದಪ್ಪ, ಸತ್ಯಮೂರ್ತಿ, ಸುಜಾತರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.