
ಮಲೇಬೆನ್ನೂರು: ಸಮೀಪದ ದೇವರ ಬೆಳಕೆರೆ ಮೈಲಾರ ಲಿಂಗೇಶ್ವರ ರಥೋತ್ಸವದ ಪ್ರಯುಕ್ತ ಶನಿವಾರ ನಡೆದ ‘ಕಾಲಶಸ್ತ್ರ ಪವಾಡ’ ಜನಮನ ಸೂರೆಗೊಂಡಿತು.
ಗೊರವಪ್ಪ ತ್ರಿಶೂಲ ತೂರಿಸಿಕೊಂಡು ಇನ್ನೊಂದು ಬದಿಯಿಂದ ಹೊರಕ್ಕೆ ತೆಗೆದು ಪವಾಡ ಪ್ರದರ್ಶಿಸಿದರು. ಇನ್ನೊಂದು ಪವಾಡದಲ್ಲಿ, ಕೈಗೆ ಮುಳ್ಳಿನ ಮಾದರಿಯ ದೀಪ ಚುಚ್ಚಿಕೊಂಡು ದೇವತೆಗೆ ಆರತಿ ಮಾಡಿದರು. ನಂತರ ಕಂಬಕ್ಕೆ ಭದ್ರವಾಗಿ ಬಿಗಿಯಲಾಗಿದ್ದ ಸರಪಳಿಯನ್ನು ಎಳೆದು ತುಂಡು ಮಾಡುವ ಪ್ರದರ್ಶನ ನೀಡಿದರು.
ಪವಾಡ ಮಾಡಿದ್ದ ವ್ಯಕ್ತಿ ಭಂಡಾರ ಹಚ್ಚಿಕೊಂಡು ಯಾವುದೇ ನೋವು ಆಗದ ರೀತಿ ಸಾಮಾನ್ಯನಂತೆ ನಡೆದು ಹೋಗಿದ್ದು ವಿಶೇಷ.
ಭಕ್ತರು ‘ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ.. ಚಾಂಗಮಲೋ’ ಎಂದು ಕೂಗಿದರು. ಓಕಳಿಯಾಟದೊಂದಿಗೆ ಉತ್ಸವಕ್ಕೆ ತೆರೆಬಿತ್ತು.
ದೀವಟಿಗೆ, ಚಾಮರ, ಚಾವಟಿ ಸೇವೆ, ಬಾಯಿಗೆ ಬೀಗ ಬೀಗ ಹಾಕಿಕೊಂಡವರು ಹರಕೆ ಸಮರ್ಪಣೆ ಮಾಡಿದರು.
ಮೈಲಾರ ಜಾತ್ರೆ ಮುಕ್ತಾಯವಾದ 3 ದಿನದ ನಂತರ ಇಲ್ಲಿ ಜಾತ್ರೆ ನಡೆಯುವ ಪರಂಪರೆ ಹಿಂದಿನಿಂದ ನಡೆದು ಬಂದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಜನರು ಪವಾಡ ವೀಕ್ಷಣೆಗೆ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.