ದಾವಣಗೆರೆ: ಯಾವುದೇ ವ್ಯಕ್ತಿಯನ್ನು ಕೊಲೆ ಮಾಡುವುದು ಧರ್ಮವಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ ಕಾರಣಕ್ಕೆ ಕನ್ಹಯ್ಯಲಾಲ್ ಅವರನ್ನು ಕೊಲೆ ಮಾಡಿರುವುದು ಇಸ್ಲಾಂ ವಿರೋಧಿ ಕೃತ್ಯ. ಇದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ತರುವ ಸಂಗತಿ. ಹಾಗಾಗಿ ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಮ್ಮತ್ ಚಿಂತಕರ ವೇದಿಕೆಯು ಜಿಲ್ಲಾಧಿಕಾರಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಇಸ್ಲಾಂ ತತ್ವ ಸಿದ್ಧಾಂತದ ಪ್ರಕಾರ ಯಾವುದೇ ಅಮಾಯಕ ವ್ಯಕ್ತಿಗೆ ತೊಂದರೆ ನೀಡಬಾರದು. ಇಸ್ಲಾಂ ಶಾಂತಿಯನ್ನು ಸಾರುವ ಧರ್ಮ. ಮಾನವೀಯತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆಯುವವರು ಮುಸಲ್ಮಾನರೇ ಅಲ್ಲ ಎಂದು ಸಾರಲಾಗಿದೆ. ಹಾಗಾಗಿ ಈ ಹೇಯ ಕೃತ್ಯ ನಡೆಸಿರುವಂತಹ ವ್ಯಕ್ತಿಗಳು ಮುಸಲ್ಮಾನನಾಗಿರಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದ ಬಗ್ಗೆ ತಿಳಿವಳಿಕೆ ಇಲ್ಲದ ಕ್ರೂರಿಗಳು ಇವರು. ಈ ಕೃತ್ಯ ಎಸಗಿರುವಂತಹ ವ್ಯಕ್ತಿಗಳ ವಿರುದ್ಧ ತೀವ್ರ ಕ್ರಮ ತೆಗೆದುಕೊಂಡು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಮ್ಮತ್ ಚಿಂತಕರ ವೇದಿಕೆಯ ಅಧ್ಯಕ್ಷ ಅನೀಸ್ ಪಾಷಾ, ಆಬೀದ್ ಹುಸೇನ್, ಎಚ್.ಎಸ್. ಗೌಸ್ಖಾನ್, ಕೆ. ಮಹಮ್ಮದ್ ಬಾಷಾ, ಅಬ್ದುಲ್ ಸತ್ತಾರ್, ಖಲೀಲ್ ಖಾನ್, ಅಹ್ಮದ್ ಬಾಷಾ, ಮೊಹಮ್ಮದ್ ಹಯಾತ್, ಸೈಯದ್ ರಾಜೀಖ್, ನಾಸಿರ್ ಖಾನ್, ಅಬ್ದುಲ್ ವಾಹಬ್, ಮೊಹಮ್ಮದ್ ಜುನೇದ್, ಮುಸ್ತಾಫಾ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.