ಮಲ್ಲಿಗೇನಹಳ್ಳಿ (ನ್ಯಾಮತಿ): ಗ್ರಾಮಸ್ಥರು ಒಂದುಗೂಡಿ ಜಾತಿ ಭೇದವಿಲ್ಲದೆ ಶ್ರಾವಣ ಮಾಸದ ಸೋಮವಾರ ವಿಶಿಷ್ಟವಾಗಿ ಆಚರಿಸುವ ಧಾರ್ಮಿಕ ಹಬ್ಬ ಕಂತೆಭಿಕ್ಷೆ ಹಬ್ಬ.
ತಾಲ್ಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರತಿ ಸೋಮವಾರ ಬೆಳಿಗ್ಗೆಯಿಂದಲೇಹಬ್ಬದ ಆಚರಣೆಗಳು ಆರಂಭವಾಗುತ್ತವೆ. ಗ್ರಾಮದ ಯಾರ ಮನೆಯಲ್ಲೂ ಹಂಚು ಇಡುವುದಿಲ್ಲ. ಬೆಳಿಗ್ಗೆ ಲಘು ಉಪಾಹಾರ ಸೇವಿಸಿ, ರಾತ್ರಿ ದೇವಸ್ಥಾನ ಗಂಟೆ ಬಾರಿಸಿದ ನಂತರವೇ ಊಟ ಮಾಡುವುದು. ಮನೆಯ ದನಕರುಗಳನ್ನು ಹೊರಗೆ ಬಿಡುವುದಿಲ್ಲ. ಯಾರೂ ಚಪ್ಪಲಿ ಸಹ ಧರಿಸುವಂತಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆ ಎನ್ನುತ್ತಾರೆ ಗ್ರಾಮಸ್ಥರು.
ಮೊದಲ ಸೋಮವಾರ ಸಂಜೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದೇವಿಯ ಖೇಲು ಸ್ಥಾಪಿಸಲಾಗುವುದು. ವಿಶೇಷಪೂಜೆ ನೆರವೇರಿದ ನಂತರ ಗ್ರಾಮದ ಪ್ರತಿಯೊಂದು ಮನೆಯಿಂದ ವಿವಿಧ ರೀತಿಯ ಸಿಹಿ ಅಡುಗೆ, ಚಿತ್ರಾನ್ನ, ಪಾಯಸ ತಂದು ದೇವಿಗೆ ನೈವೇದ್ಯ ಮಾಡಲಾಗುವುದು. ನಂತರ ಪ್ರಸಾದವನ್ನು ಸಾಮೂಹಿಕವಾಗಿ ಸೇವಿಸುತ್ತಾರೆ. ಮನೆಯಲ್ಲಿದ್ದವರು ಮನೆಯಲ್ಲಿ ಊಟ ಮಾಡುತ್ತಾರೆ. ಈ ಆಚರಣೆ ಶ್ರಾವಣ ಮಾಸದ ಕೊನೆಯ ಸೋಮವಾರದ ತನಕ ನಡೆಯುತ್ತದೆ. ಅಂದು ಗ್ರಾಮ ದೇವತೆಗಳಾದ ಬಸವೇಶ್ವರ, ಪರಿಶಿಷ್ಟರ ಕಾಲೊನಿಯ ದುರ್ಗಮ್ಮ, ಆಂಜನೇಯಸ್ವಾಮಿ ಮೂರ್ತಿಗಳ ಮೆರವಣಿಗೆ ನಡೆಯುವುದು ಎಂದು ಹಿರಿಯರಾದ ಎಂ.ಜಿ. ಬಸವರಾಜಪ್ಪ, ಜಿ.ಎಚ್. ಪರಮೇಶ್ವರಪ್ಪ, ಬೆಳಗುತ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್. ರವಿಕುಮಾರ, ಹನುಮಂತಪ್ಪ ಹೇಳಿದರು. ಬೆಳಗುತ್ತಿ ಗ್ರಾಮದ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ದೇವಿಯ ಖೇಲು ಸ್ಥಾಪಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.