
ಜಗಳೂರು: ಆಧುನಿಕ ಸಮಾಜದಲ್ಲಿ ವಿದ್ಯೆ,ಸಂಪತ್ತು,ಅಧಿಕಾರ ಸೇರಿದಂತೆ ಸಕಲ ಸವಲತ್ತುಗಳಿದ್ದರೂ ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಮರೀಚಿಕೆಯಾಗುತ್ತಿದೆ ಎಂದು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ದಾವಣಗೆರೆ ಮುಖ್ಯ ರಸ್ತೆಯ ನಾಗರಕಟ್ಟೆ ಬಳಿ ಬುಧವಾರ ಶ್ರೀ ನಾಗದೇವ, ವಿಘ್ನೇಶ್ವರ,ಶಿವ ಪಾರ್ವತಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಪಂಚತತ್ವಗಳು ಸಾರ್ವಕಾಲಿಕವಾಗಿ ಏಕಸ್ವರೂಪವಾಗಿವೆ. ಮನುಷ್ಯನ ಜೀವನ ಶೈಲಿ ಬದಲಾವಣೆಯಾಗಿದೆ. ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕಿದೆ. ವಿದ್ಯಾವಂತರು ಸಂಸ್ಕಾರ ಮರೆಯುತ್ತಿದ್ದಾರೆ. ಮನುಷ್ಯನಿಗೆ ಪುಣ್ಯ ಮತ್ತು ಧರ್ಮ ಕಾರ್ಯಗಳಿಂದ ಮಾತ್ರ ಸುಖ,ನೆಮ್ಮದಿ ಸಿಗುತ್ತದೆ. ಜಗತ್ತಿನಲ್ಲಿ ನಂಬಿಕೆ,ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನಂತರ ಪ್ರಥಮ ಪ್ರವೇಶ ಇದಾಗಿದ್ದು ಅತ್ಯಂತ ಸಂತಸ ತಂದಿದೆ. ತಾಲ್ಲೂಕಿನಲ್ಲಿ ಗವಿಮಠದ ಪರಂಪರೆಯನ್ನು ಮುಂದುವರೆಸುತ್ತಿರುವ ಭಕ್ತಸಮೂಹಕ್ಕೆ ಚಿರ ಋಣಿಯಾಗಿರುವೆ. ಇಲ್ಲಿನ ಅರಳಿಕಟ್ಟೆಯಲ್ಲಿ ನಾಗದೇವತೆ,ಶಿವಪಾರ್ವತಿ,ದೇವರುಗಳ ಪ್ರತಿಷ್ಠಾಪನೆಯ ಧಾರ್ಮಿಕ ಸತ್ಕಾರ್ಯಗಳು ಸ್ವಾಗತರ್ಹ ಎಂದು ಸ್ವಾಮೀಜಿ ಹೇಳಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಆಧುನಿಕ ಬದುಕಿನ ಒತ್ತಡಗಳಲ್ಲಿ ಮನುಷ್ಯನಿಗೆ ನೆಮ್ಮದಿಯಿಲ್ಲದಂತಾಗಿದೆ. ಜನತೆ ಸ್ವಾರ್ಥ ಬದುಕು, ಸಂಸಾರ, ಹಣ ಗಳಿಕೆ, ಅಧಿಕಾರ ಲಾಲಸೆಗಳಲ್ಲಿ ಮುಳುಗಿ ಹೋಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯತೆಯ ಸೆಲೆಗಳಾಗಿವೆ ಎಂದು ಹೇಳಿದರು.
ನಾಗರಕಟ್ಟೆ ಸೇವಾ ಸಮಿತಿಯ ಅಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಗಣೇಶ್, ಕುಮಾರಗೌಡ್ರು, ಮಂಜುನಾಥ್, ಮನೋಹರ್ ರೆಡ್ಡಿ,ನಾಗರಾಜ್, ಗೌರಿಪುರ ಶಿವಣ್ಣ, ವಿಠ್ಠಲ್ ಶ್ರೇಷ್ಠಿ, ಪ.ಪಂ ಮಾಜಿ ಸದಸ್ಯೆ ಲಲಿತಮ್ಮಶಿವಣ್ಣ, ಬಂಗಾರಪ್ಪ, ವೆಂಕಟೇಶ್ ಮೂರ್ತಿ, ಪಂಕಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.