ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಯುವ ಸಂಸ್ಥೆ ಆಯೋಜಿಸಿದ್ದ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ 2025 ಕಾರ್ಯಕ್ರಮವನ್ನು ರಂಗಾಯಣ ಮೈಸೂರು ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹಾಗೂ ವಾಗ್ಮಿ ಹಾರಿಕ ಮಂಜುನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು.
ದಾವಣಗೆರೆ: ‘ಯೋಧರ ನಾಡು ಕೊಡಗು ದೇಶಕ್ಕಾಗಿ ಸರ್ವಸ್ವವನ್ನೂ ನೀಡಿದೆ. ರಾಷ್ಟ್ರದ ಸೈನಿಕರಿಗೆ ದರಿದ್ರ ಜನಪ್ರತಿನಿಧಿಗಳಿಂದ ಯಾವುದೇ ರೀತಿಯಿಂದಲೂ ಅಗೌರವ ಆಗಬಾರದು’ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯಪಟ್ಟರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಯುವ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಚೀನಾಕ್ಕೆ ಭಾರತದ ಭಯ ಇದೆ. ಸುಲಭವಾಗಿ ನಮ್ಮ ದೇಶವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬುದು ಚೀನಾದವರಿಗೂ ಗೊತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗದಿದ್ದರೆ ಜಮ್ಮು– ಕಾಶ್ಮೀರ ನಮ್ಮ ಕೈಯಲ್ಲಿ ಇರುತ್ತಿತ್ತಾ’ ಎಂದು ಪ್ರಶ್ನಿಸಿದರು.
‘ಭಾರತ– ಚೀನಾ ಯುದ್ಧದ ವೇಳೆ ದೇಶದ ಯೋಧರಿಗೆ ಗ್ಲೌಸ್ ಇರಲಿಲ್ಲ, ಯುದ್ಧ ಸಾಮಗ್ರಿಗಳು ಇರಲಿಲ್ಲ. ಅಂದಿನ ರಕ್ಷಣಾ ಸಚಿವ ಮೆನನ್ ಹಾಗೂ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಕುಹಕ ನೀತಿಯಿಂದಾಗಿ ಭಾರತ ಸೋಲೊಪ್ಪಿಕೊಂಡಿತು. ಮಹಾನ್ ಯೋಧ, ಅಪ್ಪಟ ಉಕ್ಕಿನ ಮನುಷ್ಯ ಜನರಲ್ ತಿಮ್ಮಯ್ಯ ಅವರಿಗೆ ಅನ್ಯಾಯವಾಯಿತು’ ಎಂದು ಹೇಳಿದರು.
‘ಯುದ್ಧದ ಬಗ್ಗೆ ಹೇಳುವುದು ಸಿಡಿಲು ಬಡಿದ ವೇಳೆ ಮೂಡುವ ಬೆಳಕಿನ ಬಗ್ಗೆ ವಿವರಿಸಿದಂತೆ. ಯುದ್ಧದ ವೇಳೆ ಸಮಯವೇ ಇರುವುದಿಲ್ಲ. ಯೋಧರು ಕಣ್ಣಿನಿಂದಲೇ ಸಂವಹನ ನಡೆಸುತ್ತಾರೆ. ಪ್ರೇರಣಾ ಸಂಸ್ಥೆಯವರು ಕೋವಿಡ್ ವೇಳೆ ಸೇವೆ ಸಲ್ಲಿಸಿದ್ದು ಶ್ಲಾಘನೀಯ’ ಎಂದು ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಂಘದ ಅಧ್ಯಕ್ಷ ಮನೋಹರ್ ಮಹೇಂದ್ರಕರ ಹೇಳಿದರು.
ಪ್ರೇರಣಾ ಸಂಸ್ಥೆಯ ಸದಸ್ಯ ಮಹೇಶ್ ಶೆಟ್ಟಿ, ‘ಡಿಪ್ಲೊಮಾ ಸಹಪಾಠಿಗಳೆಲ್ಲ ಸೇರಿ ಕಟ್ಟಿದ ಸಂಸ್ಥೆಯೇ ಪ್ರೇರಣಾ. ಸಂಸ್ಥೆಯಿಂದ ರಕ್ತದಾನ ಶಿಬಿರ, ಪುಸ್ತಕ ವಿತರಣೆ, ಗಿಡ ನೆಡುವ ಕಾರ್ಯ, ಸಂಗೀತ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿದರು. ಪ್ರೇರಣಾ ಸಂಸ್ಥೆಯ ಅಧ್ಯಕ್ಷ ಎಸ್.ಟಿ.ವೀರೇಶ್, ಜಿಲ್ಲಾ ಪ್ಯಾರಾಮಿಲಿಟರಿ ಮಾಜಿ ಹಾಗೂ ಹಾಲಿ ಸೈನಿಕರ ಕ್ಷೇಮಾಭಿವೃದ್ಧಿ ಸೊಸೈಟಿಯ ಉಪಾಧ್ಯಕ್ಷ ಕೃಷ್ಣೇಗೌಡ ಬಿ.ವಿ. ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.